ಪ್ರತಿ ವಾರ್ಡಿಗೆ 75 ಲಕ್ಷ ರೂ. ಅನುಮೋದನೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.29:- ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮಹಾನಗರ ಪಾಲಿಕೆಯ 65 ವಾರ್ಡ್‍ಗಳಿಗೆ ತಲಾ 75 ಲಕ್ಷ ರೂ. ಅನುದಾನ ನೀಡಲು ಶುಕ್ರವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ದೊರೆಯಿತು.
ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದಸ್ಯರ ಒತ್ತಾಯದ ಮೇರೆಗೆ ಮೇಲಿನ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಸೂಚಿ ಮಂಡನೆಗೂ ಮುನ್ನವೇ 1 ಕೋಟಿ ರೂ. ಅನುದಾನ ನೀಡುವಂತೆ ಬಿಜೆಪಿ ಸದಸ್ಯರು ಮೇಯರ್ ಶಿವಕುಮಾರ್ ಅವರನ್ನು ಒತ್ತಾಯಿಸಿದರು. ಇದಕ್ಕೆ ಜೆಡಿಎಸ್ ಸದಸ್ಯರು ದನಿಗೂಡಿಸಿದರು.
2022-23ರ ಅವಧಿಯಲ್ಲಿ ನೀಡಿರುವ 75 ಲಕ್ಷ ರೂ. ಅನುದಾನಕ್ಕೆ ಈಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪಾಲಿಕೆಯ ಈ ಅವಧಿ ಪೂರ್ಣಗೊಳ್ಳಲು ಕೆಲವೇ ತಿಂಗಳು ಬಾಕಿಯಿದ್ದು, ಈಗ ಅನುದಾನ ನೀಡಿದರೆ ಮಾತ್ರ ಬಳಸಲು ಸಾಧ್ಯವಾಗುತ್ತದೆಂದು ಆಗ್ರಹಪಡಿಸಿದರು.
ನೂತನ ಆಯುಕ್ತ ಅಷಾದ್ ಉರ್ ರೆಹಮಾನ್ ಷರೀಫ್ ಅವರು, ನೆನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಅಧಿಕಾರಿಗಳ ಸಭೆ ಮಾಡಲು ಸಾಧ್ಯವಾಗಿಲ್ಲ. ಪಾಲಿಕೆ ಆರ್ಥಿಕ ಪರಿಸ್ಥಿತಿ ಪರಿಶೀಲಿಸಲು ಸಮಯಬೇಕಾಗುತ್ತದೆ. ತಕ್ಷಣಕ್ಕೆ 25 ಲಕ್ಷ ರೂ. ನೀಡಲಾಗುವುದು. ಮುಂದಿನ ವಾರವೇ ಮತ್ತೊಂದು ಸಭೆ ಕರೆಯುವುದಾಗಿ ಹೇಳಿದರು.
ಇದಕ್ಕೆ ಒಪ್ಪದ ಸದಸ್ಯರು ಈಗ 75 ಲಕ್ಷ ರೂ. ನೀಡಿ, ಮುಂದಿನ ಸಭೆಯಲ್ಲಿ 25 ಲಕ್ಷ ರೂ. ನೀಡುವಂತೆ ಒತ್ತಾಯಿಸಿದರು. ಬಿಜೆಪಿ ಸದಸ್ಯ ರಮೇಶ್ 50 ಲಕ್ಷ ರೂ. ನೀಡಿದರೆ ಸಾಕೆಂದು ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಸದಸ್ಯ ಅಯೂಬ್ ಖಾನ್ ಪಾಲಿಕೆ ಆರ್ಥಿಕ ಸ್ಥಿತಿ ನೋಡಬೇಕಾಗುತ್ತದೆ ಎಂದು ನುಡಿದರು.
ಈ ವೇಳೆಯೂ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು 1 ಕೋಟಿ ರೂ. ನೀಡುವಂತೆ ಆಗ್ರಹಿಸಿದರು. ಆಯುಕ್ತರೊಂದಿಗೆ ಚರ್ಚಿಸಿದ ಮೇಯರ್ ಶಿವಕುಮಾರ್ ಪ್ರತಿ ಸದಸ್ಯರಿಗೆ 75 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದರು. ಶೀಘ್ರದಲ್ಲಿ ಟೆಂಡರ್ ಕರೆದು ವರ್ಕ್ ಆರ್ಡರ್ ನೀಡುವಂತೆಯೂ ಅಧಿಕಾರಿಗಳಿಗೆ ಆದೇಶಿಸಿದರು.
ಅನುಪಯುಕ್ತವಾದ ಟ್ಯಾಬ್:
ಪಾಲಿಕೆ ಸದಸ್ಯರಿಗೆ ನೀಡಿರುವ ಟ್ಯಾಬ್ ನಿರ್ವಹಣೆ ಕುರಿತಂತೆ ಸದಸ್ಯ ಕೆ.ವಿ.ಶ್ರೀಧರ್ ಸಭೆಯ ಗಮನಸೆಳೆದರು. ಟ್ಯಾಬ್ ಅನುಪಯುಕ್ತವಾಗಿದ್ದು, ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಈ ವೇಳೆ ಪರ ವಿರೋಧ ವ್ಯಕ್ತವಾಯಿತು.
ಅಜೆಂಡಾಗೆ ಆಗ್ರಹ:
ಅಜೆಂಡಾ ನೀಡದೆ ಸಭೆ ನಡೆಸುತ್ತಿರುವುದಕ್ಕೆ ಜೆಡಿಎಸ್ ಸದಸ್ಯ ಎಸ್‍ಬಿಎಂ ಮಂಜು ಆಕ್ರೋಶ ವ್ಯಕ್ತಪಡಿಸಿದರು. ಅಜೆಂಡಾ ಇಲ್ಲದೇ ಸಭೆ ನಡೆಸಬಹುದೇ ಕೌನ್ಸಿಲ್ ಕಾರ್ಯದರ್ಶಿ ಉತ್ತರಿಸಬೇಕೆಂದು ಒತ್ತಾಯಿಸಿದರು. ಕೌನ್ಸಿಲ್ ಕಾರ್ಯದರ್ಶಿ ಉತ್ತರಕ್ಕೂ ಸಮಾಧಾನಗೊಳ್ಳದೇ ಮಾತು ಮುಂದುವರಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, ನನ್ನ ಅವಧಿ ಸೆಪ್ಟೆಂಬರ್‍ಗೆ ಮುಗಿಯಲಿದೆ. ಸದಸ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೇನೆ. ಮುಂದಿನ ಸಭೆಯಲ್ಲಿ ಅಜೆಂಡದ ಮೇಲೆ ಚರ್ಚೆ ಮಾಡೋಣ ಎಂದು ಸಮಾಧಾನಪಡಿಸಿದರು.
ನಾಯಿ ಹಾವಳಿ ನಿಯಂತ್ರಣಕ್ಕೆ ಆಗ್ರಹ
ನಗರ ಪ್ರದೇಶದಲ್ಲಿ ಗುಂಡಿ ಮುಚ್ಚಿಸಬೇಕು ಮತ್ತು ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ಜೆಡಿಎಸ್ ಪಕ್ಷದ ನಾಯಕಿ ಅಶ್ವಿನಿ ಅನಂತು ಒತ್ತಾಯಕ್ಕೆ ಇತರ ಸದಸ್ಯರು ದನಿಗೂಡಿಸಿದರು.
ನಾಯಿಗಳ ಹೆಚ್ಚಳದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಯಾರಿಗೆ ದೂರು ಕೊಡಬೇಕು ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರೇಮಾ ಶಂಕರೇಗೌಡ ಅವರು ಪಾಲಿಕೆ ಸದಸ್ಯರಿಗೆ ನಾಯಿ ಕಚ್ಚಿವೆ ಎಂದು ಅಳಲುತೊಡಿಕೊಂಡರು.ನಾಯಿಗಳೊಂದಿಗೆ ಹಂದಿಗಳ ಸಮಸ್ಯೆಯೂ ಹೆಚ್ಚಾಗಿದೆ. ಹಂದಿ ಹಿಡಿಯಲು ಹೋದವರಿಗೆ ಚಾಕು ತೋರಿಸಿ ಹೆದರಿಸುತ್ತಿದ್ದಾರೆ ಎಂದು ಸದಸ್ಯೆ ಶಾಂತಮ ಆಕ್ರೋಶದಿಂದ ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ನಾಯಿಗಳ ಹಿಡಿಯಲು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸಬೇಕಿದೆ. ಈ ಸಮಸ್ಯೆ ಉಲ್ಬಣಗೊಂಡಿದ್ದು, ಪರಿಹಾರಕ್ಕೆ ವಿಶೇಷ ಚರ್ಚೆ ನಡೆಸಬೇಕಿದೆ ಎಂದು ಚರ್ಚೆಗೆ ತೆರೆ ಎಳೆದರು.
ಹೆಚ್ಚುವರಿ ಪೌರಕಾರ್ಮಿಕರ ನೇಮಕ
ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಕೊರತೆ ಇದೆ. 5ರಿಂದ 10 ಪೌರಕಾರ್ಮಿಕರು ಪ್ರತಿನಿತ್ಯ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಇದರಿಂದ ಕಸ ವಿಲೇವಾರಿ ಕಷ್ಟವಾಗಿದೆ. ಇತರೆ ಕೆಲಸಗಳಿಗೂ ಅಡಚಣೆಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆಯೂಬ್ ಖಾನ್ ಸಭೆಯ ಗಮನಸೆಳೆದರು.
ಈ ವರ್ಷದ ಸ್ವಚ್ಛ ಭಾರತ ಮಿಷನ್ ಸರ್ವೇ ಆರಂಭಗೊಂಡಿದೆ. ಪ್ರಥಮ ಸ್ಥಾನ ಪಡೆಯಲು ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕಿದೆ. ಆಯುಕ್ತರ ಸಹಿತವಾಗಿ ಎಲ್ಲರ ಮೇಲೆ ಜವಾಬ್ದಾರಿ ಇದೆ. ಅಗತ್ಯ ಸಿಬ್ಬಂದಿಯೇ ಇಲ್ಲದಿದ್ದರೆ ಸ್ವಚ್ಛತೆಯಲ್ಲಿ ಸ್ಥಾನ ಪಡೆಯುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ಇಂಧೋರ್ ಅಧ್ಯಯನ ಪ್ರವಾಸದ ವೇಳೆ ಪೌರಕಾರ್ಮಿಕರು 2 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಪ್ರತಿ ವಾರ್ಡಿಗೆ ಮೂವರು ಪೌರಕಾರ್ಮಿಕರನ್ನು ಕೊಡಬಹುದು. ಈ ಬಗ್ಗೆ ಚರ್ಚಿಸಿ ನಿರ್ಣಯಿಸುವುದಾಗಿ ತಿಳಿಸಿದರು. ಮ.ವಿ.ರಾಮಪ್ರಸಾದ್ ಆಡಳಿತ ಪಕ್ಷದ ನಾಯಕನಾಗಿ ಆಯ್ಕೆಯಾದರು.
ರಸ್ತೆಗೆ ಭೀಮಬಾಯಿ ಹೆಸರು ನಾಮಕರಣ
ಅಶೋಕಪುರಂ 1ನೇ ಮುಖ್ಯರಸ್ತೆ, 1ನೇ ಕ್ರಾಸ್‍ನಿಂದ 13ನೇ ಕ್ರಾಸ್‍ವರೆಗೆ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ತಾಯಿಯವರಾದ ಭೀಮಬಾಯಿ ಹೆಸರು ನಾಮಕರಣಕ್ಕೆ ಸಭೆ ಒಪ್ಪಿಗೆ ನೀಡಿತು.
ಎನ್‍ಐಇ ಕಾಲೇಜು ಹಾಸ್ಟೆಲ್ ಪಕ್ಕದಲ್ಲಿರುವ ಅಶೋಕಪುರಂ ರಸ್ತೆಯಿಂದ ಇಸ್ಕಾನ್ ದೇವಸ್ಥಾನದ ಎದುರುಗಡೆ ರಸ್ತೆಯಿಂದ ಸಿಗ್ನಲ್ ಲೈಟ್ ಮುಂದಿನ ರಸ್ತೆಯಿಂದ ರಾಮಕೃಷ್ಣನಗರ ವೃತ್ತದವರೆಗಿನ ರಸ್ತೆಗೆ ಅಂಬೇಡ್ಕರ್ ತಂದೆಯರಾದ ರಾಮ್‍ಜೀ ಸಕ್ಪಾಲ್ ಹೆಸರು ನಾಮಕರಣ ಹಾಗೂ ವಿದ್ಯಾಶಂಕರ ಶಿಕ್ಷಣ ಸಂಸ್ಥೆಯವರ ಕಟ್ಟಡ ನಿರ್ಮಾಣ ಪ್ರಸ್ತಾಪಗಳನ್ನು ಮುಂದೂಡಲಾಯಿತು.
ಉಪ ಮೇಯರ್ ಡಾ.ಜಿ.ರೂಪಾ, ಶಾಸಕ ಟಿ.ಎಸ್. ಶ್ರೀವತ್ಸ ಇದ್ದರು.