
ಸಂಜೆವಾಣಿ ವಾರ್ತೆ
ಸಂಡೂರು:ನ: 16: ಪ್ರತಿಯೊಬ್ಬರ ಬಾಳಿನ ಬೆಳಕಾಗಲು ಸಂವಿಧಾನ ಉತ್ತಮ ಮಾರ್ಗದರ್ಶಿ ಅದರ ಚೌಕಟ್ಟನ್ನು ಯಾರೂ ಮುರಿಯಬಾರದು ಎಂದು ಮುಖ್ಯ ಶಿಕ್ಷಕಿ ಅನೀಸ್ ಫಾತಿಮಾ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಸಂವಿಧಾನ ಓದುವ ದಿನಾಚರಣೆ ಆಚರಿಸಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅನೀಸ್ ಫಾತಿಮಾ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಸರ್ವರಿಗೂ ಸಮಪಾಲು ಸಮಬಾಳು ಕಲ್ಪಿಸಲು ಸಂವಿಧಾನ ರಚಿಸಲಾಗಿದೆ ಅದರಂತೆ ಅನುಸರಿಸಿ ಭಾರತದ ಪ್ರಜಾಪ್ರಭುತ್ವದ ಸಾಧನೆ ವಿಶ್ವಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಅವರು ತಿಳಿಸಿದರು,
ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಶಿಕ್ಷಕ ದೊಡ್ಡ ಬಸವ ಮಾತನಾಡಿ ಇಂದು ಜಗತ್ತಿನ ಶಕ್ತಿಶಾಲಿ ಮತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದವರಾದ ನಾವು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. 1947 ಆಗಸ್ಟ್ 15 ರಂದು ಸ್ವತಂತ್ರ ದೊರಕುವುದು ಖಚಿತವಾಗಿದ್ದರಿಂದ 1946 ಡಿಸೆಂಬರ್ 9 ರಿಂದ 1949 ನವೆಂಬರ್ 26 ರವರೆಗೆ ಸುಮಾರು 2 ವರ್ಷ 11 ತಿಂಗಳು 18 ದಿನಗಳ ಸಮಯವನ್ನು ತೆಗೆದುಕೊಂಡು ಸಂವಿಧಾನ ರಚನಾ ಸಮಿತಿಯು ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ರಚಿಸಿಕೊಂಡು ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ.
ಇಡೀ ಸಂವಿಧಾನದ ತಿರುಳನ್ನು ಪ್ರಸ್ತಾವನೆಯಲ್ಲಿ ನಮೂದಿಸಲ್ಪಟ್ಟಿದೆ. ಇದು ನಮ್ಮ ಭಾರತದ ಎಲ್ಲಾ ಪ್ರಜೆಗಳ ಹೆಸರಿನಲ್ಲಿ ಅರ್ಪಿಸಿಕೊಂಡಿರುವುದರಿಂದ ಪ್ರಜೆಗಳೇ ಮೂಲಾಧಿಕಾರವನ್ನು ಹೊಂದಿರುವುದು ಹೆಗ್ಗುರುತಾಗಿದೆ, ಹಾಗಾಗಿ ಇದನ್ನು ಸಂವಿಧಾನದ ಕೈ ದೀಪ ಎಂದು ಕರೆಯುತ್ತಾರೆ. ಇಂದು ನಾವು ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿಜ್ಞರೂಪದಲ್ಲಿ ಪ್ರಮಾಣಿಸಿ ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ ಪ್ರಜಾಸತ್ತಾತ್ಮಕ ಸಮಾಜವಾದ ಜಾತ್ಯಾತೀತತೆ ಮುಂತಾದವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಜಾತಂತ್ರವನ್ನು ಯಶಸ್ವಿಗೊಳಿಸೋಣವೆಂದು ಪ್ರತಿಜ್ಞೆಮಾಡಿಕೊಳ್ಳೋಣ ಎಂದು ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ ಸಂವಿಧಾನದ ಮಹತ್ವ ಎತ್ತಿ ಹಿಡಿಯುವ ವಿಶ್ವ ದಾಖಲೆಯ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೆಮ್ಮೆ ಯಾಗಿದೆ ಎಂದು ತಿಳಿಸಿದರು, ನಂತರ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು, ವಿದ್ಯಾರ್ಥಿಗಳು ಸಂಕಲ್ಪ ಮಾಡಿದರು,
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ವಿಜಯಕುಮಾರ್, ಶಾಂತಲಾ, ವೀರಣ್ಣ,ಸ್ನೇಹ ಲತಾ, ಶಶಿಕಲಾ, ಸಾವಿತ್ರಿ, ಜಭಿವುಲ್ಲಾ ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು