
ಅಥಣಿ : ಮೇ.26:ಪರಿಸರವು ಮಾನವರಿಗೆ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿ ಹಾಗೂ ಸಸ್ಯಗಳು ಸೇರಿದಂತೆ ಇತ್ಯಾದಿಗಳಿಗೆ ಅತ್ಯಮೂಲ್ಯ ಕೊಡುಗೆಯಾಗಿದ್ದು, ಇಂದು ಮನುಷ್ಯನ ಸ್ವಾರ್ಥದ ದುರಾಸೆಗೆ ಪ್ರಕೃತಿಯು ಹಾಳುಗೆಡುವುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹಿರಿಯ ಶಿಕ್ಷಕ ವಿಜಯಕುಮಾರ ಕುಮಠಳ್ಳಿ ಹೇಳೀದರು.
ಅವರು ತಾಲೂಕಿನ ತೆಲಸಂಗ ಗ್ರಾಮದ ಸಂಸ್ಕøತಿ ಸೇವಾ ಪೌಂಡೇಶನ್ ವತಿಯಿಂದ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ದುಃಖಕರವೆಂದರೆ ಇಂದು ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ 1974 ರಿಂದ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಅದರೂ ಮನುಷ್ಯ ಇನ್ನೂ ಜಾಗೃತಗೊಳ್ಳುತ್ತಿಲ್ಲ. ಪ್ರಕೃತಿ ವಿಕೋಪ, ಕೋವಿಡ್, ಬೀಕರ ಬರ, ಸುನಾಮಿಯಂತಹ ಘಟನೆಗಳಿಂದ ಮನುಷ್ಯನಿಗೆ ಪ್ರಕೃತಿ ಪಾಠ ಕಲಿಸುತ್ತಲೇ ಇದೆ. ಓಡುತ್ತಿರುವ ಜಗತ್ತಿನ ಬೆನ್ನು ಹತ್ತಿದ ಮನುಷ್ಯನಿಗೆ ಮುಂದೊಂದು ದಿನ ಬೀಕರ ಸಮಸ್ಯೆ ಎದುರಾಗುವುದಂತು ನಿಶ್ಚಿತ. ನಮಗೆ ನಮ್ಮ ಈ ಪರಿಸರವನ್ನು ನಮ್ಮ ಹಿರಿಯರು ಬಳುವಳಿಯಾಗಿ ಕೊಟ್ಟಿದ್ದಾರೆ. ನಾವೂ ಕೂಡಾ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡದೆ ಹೋದರೆ ನಮ್ಮನ್ನು ನಮ್ಮ ಕುಡಿಗಳು ಎಂದೆಂದಿಗೂ ಕ್ಷಮಿಸಲಾರರು ಎಂದರು.
ಶಿಕ್ಷಕ ವಿಜಯಾನಂದ ಮೋರೆ ಮಾತನಾಡಿ, ಭೂಮಿಯ ಮೇಲಿನ ಮಾನವನ ಅನೈತಿಕ ಚಟುವಟಿಕೆಗಳ ಪರಿಣಾಮವಾಗಿ ಉದ್ಭವಿಸಿದ ಪರಿಸರ ಮಾಲಿನ್ಯ, ಜನಸಂಖ್ಯೆಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಗಾಳಿ, ನೀರು, ಮಣ್ಣು, ಶಬ್ದ, ವಿಕಿರಣಶೀಲ, ಬೆಳಕು ಮತ್ತು ಉಷ್ಣ. ಇವುಗಳು ನಮ್ಮ ಸುತ್ತಮುತ್ತಲಿನ ಪರಿಸರದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಸಮಸ್ಯೆಗಳಾಗಿವೆ. ಈ ಪ್ರತಿಯೊಂದು ಮಾಲಿನ್ಯ ರೂಪಗಳು ಪರಸ್ಪರ ಸಂಬಂಧ ಹೊಂದಿವೆ ಮತ್ತು ಇತರರ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಈ ಪರಿಸರವನ್ನು ರಕ್ಷಿಸುವ ಮೂಲಕ ಆರೋಗ್ಯವನ್ನು ಹಾಗೂ ಸುಂದರ ಬದುಕನ್ನು ಕಾಪಾಡಿಕೊಳ್ಳೋಣ ಎಂದರು.
ಈ ವೇಳೆ ಹಿರಿಯರಾದ ಆದಪ್ಪ ಸುತಾರ, ಶಿಕ್ಷಕರಾದ ಶ್ರೀಶೈಲ ಮಠಪತಿ, ಅರುಣ ಹಾಜೇವಗೋಳ, ಜ್ಯೋತಿ ಪಾಟೀಲ, ತಾರಕಾನಂದ ಪೂಜಾರಿ, ಮಹಾಂತೇಶ ಬಡಕಂಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,