
ಕನಕಪುರ,ಮೇ.೭- ಡಿ.ಕೆ.ಶಿವಕುಮಾರ್ ಪರವಾಗಿ ಚುನಾವಣಾ ಪ್ರಚಾರ ನಡೆಸುವ ವೇಳೆ ನೆರೆದಿದ್ದ ಜನರನ್ನು ನೋಡಿ ಡಿಕೆ ಸುರೇಶ್ ಬಾವುಕರಾಗಿ ಕಣ್ಣೀರು ಸುರಿಸಿರುವುದು ದೊಡ್ಡಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯ ದೊಡ್ಡಾಲಹಳ್ಳಿ ತಮ್ಮ ಸ್ವಗ್ರಾಮದಲ್ಲಿ ಗುರುವಾರ ರಾತ್ರಿ ಶಿವಕುಮಾರ್ ಪರವಾಗಿ ಮತ ಯಾಚನೆ ನಡೆಸುವ ವೇಳೆ ಸುರೇಶ್ ಬಾವುಕರಾಗಿದ್ದಾರೆ.
ನೀವು ಬೆಳಸಿ ಕಳಿಸಿರುವ ಶಿವಕುಮಾರ್ ಅವರು ಪಕ್ಷ ಸಂಘಟನೆಗಾಗಿ ಎರಡೂವರೆ ವರ್ಷದಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ ರಾತ್ರಿ ೧ ಗಂಟೆ, ಇಲ್ಲವೇ ೨ ಗಂಟೆಗೆ ಮನೆಗೆ ಬರುತ್ತಾರೆ, ದಿನದಲ್ಲಿ ಎರಡು ಅಥವಾ ಮೂರು ಗಂಟೆ ನಿದ್ದೆ ಮಾಡುವುದೇ ಹೆಚ್ಚು ಎಂದು ಹೇಳುವಾಗ ಗದ್ಗರಿತರಾಗಿ ಬಾವುಕರಾದರು.
ಪಕ್ಷವನ್ನು ಅಧಿಕಾರಕ್ಕೆ ತರಲು ನಿದ್ದೆ, ವಿಶ್ರಾಂತಿ ಬಿಟ್ಟು ಹೋರಾಟ ನಡೆಸುತ್ತಿದ್ದಾರೆ, ಶಿವಕುಮಾರ್ ಅವರು ದಾಡಿ ಬಿಟ್ಟಿರುವುದಕ್ಕೆ ಏಕೆ ಬಿಟ್ಟಿದ್ದಾರೆ ಎಂದು ಜನರು ಕೇಳುತ್ತಾರೆ ಅದಕ್ಕೆ ಈ ತಾಲ್ಲೂಕಿನ ಜನತೆ ನೀವು ಉತ್ತರ ಕೊಡಬೇಕು ಎಂದು ಹೇಳಿದರು.
ದಾಡಿ ಏಕೆ ಬಿಟ್ಟಿದ್ದಾರೆ ಎಂಬುದಕ್ಕೆ ಮೇ ೧೩ನೇ ಫಲಿತಾಂಶದಲ್ಲಿ ನೀವು ಉತ್ತರ ಕೊಡಬೇಕು ಎಂದು ಹೇಳಿ ಬಿಕ್ಕಿ ಬಿಕ್ಕಿ ಹತ್ತರು. ಈ ಸಂದರ್ಭದಲ್ಲಿ ನೆರೆದಿದ್ದ ಜನರು ನೀವು ಅಳಬೇಡಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಸಮಾಧಾನ ಪಡಿಸಿದರು.
ಡಿ.ಕೆ.ಸುರೇಶ್ ಅವರು ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಹಿರಂಗ ವೇದಿಕೆಯೊಂದರಲ್ಲಿ ಬಾವುಕರಾಗಿ ಅತ್ತಿರುವುದು, ಪ್ರಚಾರದ ವೇಳೆ ಸ್ಥಳೀಯರು ವೀಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದು ಅದು ಟ್ರೋಲ್ ಆಗಿದೆ.