
ವಿಜಯಪುರ: ಮಾ.2:ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲಿಗೆ ಜಗತ್ತಿಗೆ ಪರಿಚಯಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು. ಶರಣರ ತತ್ವಾದರ್ಶಗಳು ಸಾರ್ವಕಾಲಿಕ ಮೌಲ್ಯಗಳಾಗಿ ಜನ ಸಾಮಾನ್ಯರ ಬದುಕಿಗೆ ದಾರಿ ದೀಪವಾಗಿವೆ ಎಂದು ಉಪನ್ಯಾಸದ ಅಧ್ಯಕ್ಷತೆಯನ್ನು ವಹಿಸಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವರಾದ ಡಾ.ವಿ.ವಿ.ಮಳಗಿ ಅವರು ಮಾತನಾಡಿದರು.
ಚಾಲುಕ್ಯ ನಗರ(ಪಶ್ಚಿಮ)ದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ ಹಾಗೂ ಶ್ರೀ ವರಸಿದ್ಧಿ ವಿನಾಯಕ ಮಹಿಳಾ ಭಜನಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಲಿಂ. ಕೋರವಾರ ಶಂಕರಗೌಡ ಶರಣಪ್ಪಗೌಡ ಪಾಟೀಲ (133) ಹಾಗೂ ಲಿಂ.ಮಹಾರುದ್ರಪ್ಪ ಈರಬಸಪ್ಪ ವಾರದ (460) ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರು ಮೊದಲಿಗೆ ಸಾಕಾರ ರೂಪದಲ್ಲಿ ಶಿವನನ್ನು ಆರಾಧಿಸಿ, ನಂತರ ಲಿಂಗದ ರೂಪದಲ್ಲಿ ಆರಾಧಿಸಿ ಲಿಂಗ ಮತ್ತು ಅಂಗದ ಅನುಸಂಧಾನವನ್ನು ಮಾಡಿ, ಅಂಗ ಮತ್ತು ಲಿಂಗದ ಮಧ್ಯೆ ಬೇದವಿಲ್ಲದೆ ಲಿಂಗಾಂಗ ಸಂಯೋಗವನ್ನು ಹೊಂದಿದರು. ಶಿವನು ಸರ್ವವ್ಯಾಪಿಯಾದವನು, ಆತನು ಪ್ರಕೃತಿಯ ಚೇತನಾ ಚೇತನಗಳಲ್ಲಿ ಸುಪ್ತವಾಗಿ ಅಡಗಿದ್ದಾನೆ. ಆತನಿಗೆ ಇಂತಹದೇ ಆದ ಆಕಾರವಿಲ್ಲ ಎಂಬುದನ್ನು ಶರಣರು ತಿಳಿದಿದ್ದರು. ಜೀವಾತ್ಮನು ತನ್ನ ಭಕ್ತಿ ಜ್ಞಾನ ಸಾಧನೆಯ ಮೂಲಕ ಮಾತ್ರ ನಿರಾಕಾರವಾದಂತ ಶಿವನನ್ನು ತಿಳಿಯಲು ಸಾಧ್ಯ ಎಂದು ಶರಣರು ಕಂಡ ಶಿವನನ್ನು ಕುರಿತು ಶರಣರ ವಚನಗಳ ಮೂಲಕ ಮಾರ್ಮಿಕವಾಗಿ ಡಾ. ಚೇತನಾ ಸಂಕೊಂಡ ಅವರು ಉಪನ್ಯಾಸ ನೀಡಿದರು.
ದತ್ತಿ ಸ್ಮರಣೆಗಳಂತ ಕಾರ್ಯಕ್ರಮಗಳ ಮೂಲಕ ನಮ್ಮಿಂದ ಮರೆಯಾದ ಚೇತನಗಳ ಸ್ಮರಣೆ ಮಾಡಲು, ಅವರ ಸಾಮಾಜಿಕ ಕೈಕರ್ಯ ಗಳನ್ನು ಸ್ಮರಿಸಲು, ಶರಣರ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸಲು ಇಂತಹ ವೇದಿಕೆಗಳಿಂದ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ಡಾ. ಉಷಾದೇವಿ ಹಿರೇಮಠ ಅವರು ಆಶಯ ನುಡಿಗಳನ್ನಾಡಿದರು.
ನಿಕಟಪೂರ್ವ ಅಧ್ಯಕ್ಷರಾದ ಮ. ಗು. ಯಾದವಾಡ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಬೆಳೆದು ಬಂದ ಬಗೆಯನ್ನು ಕುರಿತು ಅವರು ಮಾತನಾಡಿದರು. ವರಸಿದ್ಧಿ ವಿನಾಯಕ ಮಹಿಳಾ ಭಜನಾ ಮಂಡಳಿಯ ಮುಖ್ಯಸ್ಥರಾದ ಶ್ರೀಮತಿ ಪದ್ಮಜಾ ಪಾಟೀಲ ಅವರು ಗೌರವ ಉಪಸ್ಧಿತಿ ವಹಿಸಿದ್ದರು. ಪೆÇ್ರ. ರಾಜೇಶ್ವರಿ ಹಠಗಾರ, ಶ್ರೀಮತಿ ಶಕುಂತಲಾ ಹಿರೇಮಠ, ಶ್ರೀಮತಿ ಲೀಲಾವತಿ ಪಾಟೀಲ, ಶ್ರೀಮತಿ ಸವಿತಾ ಕನಕರೆಡ್ಡಿ, ಶ್ರೀ ಪ್ರವೀಣ ವಾರದ, ಶ್ರೀ. ಅಮರೇಶ ಸಾಲಕ್ಕಿ, ಶ್ರೀಮತಿ ಭಾರತಿ ಭೂಯಾರ ಉಪಸ್ಥಿತರಿದ್ದರು.
ಶ್ರೀಮತಿ. ದಾಕ್ಷಯಿಣಿ ಬಿರಾದಾರ ನಿರೂಪಿಸಿದರು. ಶ್ರೀಮತಿ ಕಮಲಾಕ್ಷಿ ಗೆಜ್ಜೆ ಸ್ವಾಗತಿಸಿದರು. ಶ್ರೀಮತಿ ಪಂಕಜಾ ಶೆಟ್ಟಿ ಪ್ರಾರ್ಥಿಸಿದರು. ಶ್ರೀಮತಿ ಶಾರದಾ ಐಹೊಳ್ಳಿ ವಂದಿಸಿದರು.