ಸಂಜೆವಾಣಿ ವಾರ್ತೆ
ಸಂಡೂರು: ಏ: 13 ತಾಲೂಕಿನ ಕುರೇಕುಪ್ಪ ಪುರಸಭೆ ಸಭಾಂಗಣದಲ್ಲಿ ಜೆ.ಎಸ್.ಡಬ್ಲ್ಯೂ ಫೌಂಡೇಶನ್, ಸಾಹಸ ಸಂಸ್ಥೆ, ಕುರೇಕುಪ್ಪ ಪುರಸಭೆ, ಮತ್ತು ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಈ ಶಿಬಿರದಲ್ಲಿ ವಡ್ಡು, ತೋರಣಗಲ್ಲು, ಕುರೇಕುಪ್ಪ ಪುರಸಭೆ, ಮತ್ತು ತಾಳೂರು ಗ್ರಾಮ ಪಂಚಾಯತಿಯ 91 ಪೌರ ಕಾರ್ಮಿಕರು ಮತ್ತು ಹತ್ತು ಮೇಲ್ವಿಚಾರಕರು ಭಾಗವಹಿಸಿದ್ದರು,
ಶಿಬಿರ ಉದ್ದೇಶಿಸಿ ಡಾ.ಪ್ರಿಯಾಂಕಾ ಅವರು ಮಾತನಾಡುತ್ತಾ ಜನರು ಆರೋಗ್ಯದಿಂದಿರಲು ನಿಮ್ಮ ದಿನನಿತ್ಯದ ಸ್ವಚ್ಛತಾ ಸೇವೆಯೇ ಕಾರಣ, ನಿಮ್ಮ ಅರೋಗ್ಯ ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ, ತಪಾಸಣೆ ಮಾಡಿಸಿಕೊಳ್ಳಿ, ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸಾಹಸ ಸಂಸ್ಥೆಯು ಇಂತಹ ಅತ್ಯುತ್ತಮ ಶಿಬಿರ ಏರ್ಪಡಿಸಿದೆ, ಕಾರ್ಮಿಕರು ಪ್ರತಿನಿತ್ಯ ಸ್ವಚ್ಛತಾ ಕಾರ್ಯ ಮಾಡುವಾಗ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಿ, ನಿಮ್ಮ ಆರೋಗ್ಯದ ಕಡೆಯೂ ನಿಮಗೆ ಎಚ್ಚರಿಕೆ ಇರಲಿ, ಅಪಾಯಕಾರಿ ಕಸ ಬ್ಲೇಡು, ಸೂಜಿ, ರಕ್ತದ ವಸ್ತುಗಳು,ರಾಸಾಯನಿಕ ವಸ್ತಗಳು, ಸತ್ತು ಕೊಳೆತ ಪ್ರಾಣಿಗಳ ಕಳೆಬರ ವಿಲೇವಾರಿ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಬ್ಯಾಕ್ಟೀರಿಯಾ, ವೈರಸ್, ಪ್ರೋಟೋಜೋವಾ ಗಳಿಂದ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಿ,ನಸ್ಯ ತಿಕ್ಕುವುದು, ತಂಬಾಕು ಸೇವಿಸುವುದು ತೀರಾ ಅಪಾಯಕಾರಿ, ಕ್ಯಾನ್ಸರ್ಗೂ ಕಾರಣವಾಗುತ್ತದೆ,ಹಲ್ಲುಗಳು ಹಾಳಾಗುತ್ತವೆ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಕೈಗಳನ್ನು ಚೆನ್ನಾಗಿ ತೊಳೆಯಿರಿ, ಒಳ್ಳೆಯ ಊಟ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಿ ಎಂದು ಅವರು ತಿಳಿಸಿದರು,
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಸತೀಶ್ ಗುಡ್ಡೆ, ಹಿರಿಯ ಆರೋಗ್ಯ ನಿರೀಕ್ಷಕ ಪ್ರಸಾದ್, ಸಾಹಸ ಸಂಸ್ಥೆಯ ಸಂಯೋಜಕ ಚಂದ್ರಶೇಖರಯ್ಯ, ಮೇಲ್ವಿಚಾರಕರಾದ ಶಿವಕುಮಾರ್,ಮಂಜುನಾಥ್, ಸುಭಾಶ್ ಚಂದ್ರ,ಗಿರೀಶ್ ಕುಲಕರ್ಣಿ, ಸುರೇಶ್ ಬಾಬು,ಸ್ವಾಮಿ, ಆಡಳಿತ ವೈದ್ಯಾಧಿಕಾರಿ ಡಾ. ಸಾದಿಯಾ,ಡಾ.ಕಾರ್ತಿಕ್, ಆಪ್ತ ಸಮಾಲೋಚಕ ಶ್ರೀರಾಮುಲು, ಪ್ರಶಾಂತ್ ಕುಮಾರ್, ವೆಂಕಪ್ಪ, ಶುಶ್ರೂಷಕ ಮಾರೇಶ್, ಲ್ಯಾಬ್ ತಂತ್ರಜ್ಞ ಇಮ್ರಾನ್, ರೋಜಾ, ಆರೋಗ್ಯ ಸುರಕ್ಷತಾಧಿಕಾರಿ ಸೂಪಿ, ತಿಪ್ಪಮ್ಮ, ತಿಪ್ಪೇಸ್ವಾಮಿ, ಪೌರ ಕಾರ್ಮಿಕ ಮಹಿಳೆಯರಾದ ಲಲಿತಾ, ಮಾರೆಮ್ಮ, ಲಕ್ಷ್ಮಿ,ಭಾರತಿ ಇತರರು ಉಪಸ್ಥಿತರಿದ್ದರು