ಪೆರಿಯಾರ್ ಚಳವಳಿ ರಾಜ್ಯಕ್ಕೆ ಅಗತ್ಯ: ಚೇತನ್

ತುಮಕೂರು, ಸೆ. ೮- ಸನಾತನ ಹಿಂದೂ ಧರ್ಮವನ್ನು ಉಳಿಸುತ್ತಿರುವುದೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಇಂದಿಲ್ಲಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮವನ್ನು ಬೆಳೆಸುತ್ತಿರುವ ಮತ್ತು ಉಳಿಸುತ್ತಿರುವ ಪಕ್ಷಗಳೆಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಎಂದು ದೂರಿದರು.
ಸನಾತನ ಧರ್ಮದ ವಿವಾದದ ಕುರಿತು ದೇಶಾದ್ಯಂತ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ರಾಜಾರಾಮ್ ಮೋಹನ ರಾಯ್ ಸನಾತನ ಧರ್ಮವನ್ನು ಹಿಂದೂ ಧರ್ಮವೆಂದು ಕರೆದರು. ಅದಕ್ಕೂ ಮೊದಲು ವೈದಿಕ ಧರ್ಮ, ವರ್ಣಾಶ್ರಮ ಧರ್ಮ, ಬ್ರಾಹ್ಮಣ್ಯ ಧರ್ಮ ಮತ್ತು ಸನಾತನ ಧರ್ಮ ಎಂದು ಕರೆಯುತ್ತಿದ್ದರು. ಸನಾತನ ಧರ್ಮ ಎಂಬ ಪದ ಸಂಸ್ಕೃತ ಮತ್ತು ಪಾಲಿಯಿಂದ ಬಂದಿದೆ. ಸನಾತನ ಅಂದರೆ ಶಾಶ್ವತ ಎಂಬ ಅರ್ಥವಿದೆ. ಆದರೆ ನನ್ನ ಪ್ರಕಾರ ಸೂರ್ಯ-ಚಂದ್ರ, ಬೆಟ್ಟ-ಗುಡ್ಡ ಇವುಗಳೇ ಶಾಶ್ವತವೇ ಹೊರತು ಸನಾತನ ಧರ್ಮವಲ್ಲ ಎಂದರು.
ಅಸಮಾನತೆ ಪಕ್ಷಗಳು ತಮಿಳುನಾಡಿನಲ್ಲಿ ಇಲ್ಲ. ಅವುಗಳು ಕರ್ನಾಟಕದಲ್ಲಿವೆ. ಪೆರಿಯಾರ್ ಚಳವಳಿ ತಮಿಳುನಾಡಿಗಿಂತ ಹೆಚ್ಚಾಗಿ ನಮ್ಮ ರಾಜ್ಯಕ್ಕೆ ಅಗ್ಯತವಿದೆ ಎಂದು ಅವರು ಪ್ರತಿಪಾದಿಸಿದರು.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಡೆಂಗ್ಯೂ, ಮಲೇರಿಯ ಮತ್ತು ಕೊರೊನಾ ರೋಗವಿದ್ದಂತೆ. ಇದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ. ಇದು ಸಂವಿಧಾನ ನೀಡಿರುವ ಸ್ವಾತಂತ್ರ್ಯ. ಆದರೆ ಉದಯನಿಧಿ ಸ್ಟಾಲಿನ್ ಅವರ ತಲೆಯನ್ನು ತೆಗೆಯಬೇಕು ಎಂದು ಸ್ವಾಮೀಜಿಯೊಬ್ಬರು ಕರೆ ನೀಡಿರುವುದನ್ನು ಖಂಡಿಸುತ್ತೇನೆ ಎಂದರು.
ವಾಕ್ ಸ್ವಾತಂತ್ರ್ಯ ಇರಬೇಕು. ಸನಾತನ ಧರ್ಮದ ಬಗ್ಗೆ ಚರ್ಚೆಯಾಗಬೇಕು. ಆಗ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು ಅಂದರೆ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು ಎಂದರು.
ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸಿರುವುದು ಪ್ರಶ್ನಾರ್ಹ. ಧರ್ಮ ಎಂದಾಗ ಸಂವಿಧಾನದ ೨೫ ವಿಧಿ ಯಾವುದೇ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದೆ. ಸನಾತನ ಹಿಂದೂ ಧರ್ಮ ಆಗಿರಬಹುದು, ಇಸ್ಲಾಂ, ಕ್ರೈಸ್ತ ಧರ್ಮವಾಗಿರಬಹುದು. ಜೈನ-ಬೌಧ ಧರ್ಮವಾಗಿರಬಹುದು. ಸಿಖ್, ನವಯಾನ ಧರ್ಮವಾಗಿರಬಹುದು. ಬಸವಣ್ಣನವರ ಲಿಂಗಾಯತ ಧರ್ಮವಾಗಿರಬಹುದು. ಇದನ್ನು ಆಚರಿಸಬಹುದು. ಆದರೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಅಂದರೆ ಅದಕ್ಕೇನು ಅರ್ಥ ಎಂದು ಪ್ರಶ್ನಿಸಿದರು.