ಪೆಟ್ರೋಲ್ ಬಂಕ್‌ನಲ್ಲಿ ಆಕಸ್ಮಿಕ ಬೆಂಕಿ: ಮಗಳು ಸಾವು, ತಾಯಿಗೆ ಗಂಭೀರ ಗಾಯ

ಮಧುಗಿರಿ, ಮೇ ೨೦- ಸಗಟು ದರದಲ್ಲಿ ಪೆಟ್ರೋಲ್ ಖರೀದಿಸಿ ತಮ್ಮ ಚಿಲ್ಲೆರೆ ಅಂಗಡಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬಂಕ್‌ಗೆ ಬಂದಿದ್ದ ತಾಯಿ ಮಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿಯ ಗ್ರಾಮದ ಚೆಕ್ ಪೋಸ್ಟ್ ಬಳಿ ಇರುವ ಪೆಟ್ರೋಲ್ ಬಂಕ್‌ಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಸಿರಾ ತಾಲ್ಲೂಕಿನ ಜವನಹಳ್ಳಿಯ ವಾಸಿಗಳಾದ ಭವ್ಯ (೧೮) ಹಾಗೂ ರತ್ನಮ್ಮ(೪೬) ರವರು ಪೆಟ್ರೋಲ್‌ನ್ನು ಕ್ಯಾನ್‌ಗೆ ತುಂಬಿಸುವಾಗ ದ್ವಿಚಕ್ರ ವಾಹನದ ಮೇಲೆ ಕುಳಿತುಕೊಂಡಿದ್ದ ಭವ್ಯ ಹಾಗೂ ತಾಯಿ ರತ್ನಮ್ಮ ಎನ್ನುವರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ತಕ್ಷಣ ಇವರುಗಳನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಭವ್ಯ ರಾತ್ರಿ ಮೃತಪಟ್ಟಿದ್ದು, ತಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಿರಾ ತಾಲ್ಲೂಕಿನ ಜವನಹಳ್ಳಿಯಲ್ಲಿನ ಸ್ವಂತ ಜಮೀನಿನಲ್ಲಿ ಭವ್ಯವರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬಡವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.