ಪುಸ್ತಕಗಳು ಶ್ರೇಷ್ಠ ವ್ಯಕ್ತಿತ್ವ ನಿರ್ಮಿಸುವ ಸಾಧನಗಳು

ಕಲಬುರಗಿ:ಎ.24: ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿವೆ. ಇವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆ. ಆದ್ದರಿಂದ ಅನೇಕ ಚಟಗಳನ್ನು ರೂಢಿಸಿಕೊಂಡು ಹಾಳಾಗುವ ಬದಲು, ಉತ್ತಮವಾದ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸವನ್ನು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಪುಸ್ತಕ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಜ್ಞಾನಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ಸದಾ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶ್ರೇಷ್ಠ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ನಾವು ಹೆಚ್ಚು ಓದಿದಷ್ಟು ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗಿ ವ್ಯಕ್ತಿ, ಶಕ್ತಿಯಾಗುತ್ತಾನೆ. ವಿಶೇಷವಾಗಿ ಯುವಕರು ಉತ್ತಮ ಗ್ರಂಥಗಳ ಅಧ್ಯಯನದತ್ತ ಚಿತ್ತಹರಿಸಬೇಕಾಗಿದೆ ಎಂದು ಒತ್ತಿ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ, ಪ್ರಾಚಾರ್ಯ ಭೀಮಾಶಂಕರ ಎಸ್.ಘತ್ತರಗಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಕೆ ಅಥವಾ ಪ್ರಮಾಣ ಪತ್ರಕ್ಕಾಗಿ ಅಧ್ಯಯನ ಮಾಡಿದರೆ ಸಾಲದು. ಬದಲಿಗೆ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲು ಮಹನೀಯರ ಜೀವನ ಚರಿತ್ರೆ ಅಧ್ಯಯನ ಮಾಡಬೇಕಾದದ್ದು ಅವಶ್ಯಕವಾಗಿದೆ. ಪುಸ್ತಕ ಓದುವದರಿಂದ ಶ್ರೇಷ್ಠ ಸಂಸ್ಕøತಿ, ಕಲೆ, ಸಾಹಿತ್ಯ, ಮಾನವೀಯ ಮೌಲ್ಯಗಳು ತಿಳಿಯುತ್ತವೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪುಸ್ತಕಗಳು ಪ್ರೇರಣೆಯನ್ನು ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಹಿರಿಯ ಸದಸ್ಯ ಶಿವಯೋಗಪ್ಪ ಬಿರಾದಾರ, ಉಪನ್ಯಾಸಕಿಯರಾದ ಅಶ್ವಿನಿ ಜೆ.ಪಾಟೀಲ, ಅರ್ಚನಾ ಎಂ.ಹೀರಾಪೂರ, ಪ್ರಮುಖರಾದ ಮೋಹನ ಪೂಜಾರಿ, ವೀರೇಂದ್ರ ಎಂ.ಮಾಲಿಪಾಟೀಲ್, ಅಭಿಶೇಕ್ ಜಮದಿ, ಗೊಲ್ಲಾಳಪ್ಪ ಟಿ.ಪೂಜಾರಿ. ಭೀಮಣ್ಣಗೌಡ ಎಸ್.ಪೊಲೀಸ್ ಪಾಟೀಲ, ನಾಗರಾಜ ಬಿ.ಪಾಟೀಲ, ಪವಿತ್ರಾ ಪಿ.ಪೋಲಿಸ್ ಪಾಟೀಲ, ಸಾಯಬಗೌಡ ಎನ್.ಬಿರಾದಾರ ಸೇರಿದಂತೆ ಮತ್ತಿತರರಿದ್ದರು.