
ಕಲಬುರಗಿ,ಏ.18: 2019ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಪಡೆಯ ಮೇಲೆ ದಾಳಿ ನಡೆದು 40 ಸೈನಿಕರು ದುರಂತಮಯವಾಗಿ ಸಾವಿಗೀಡಾದ ಘಟನೆಯ ಕುರಿತು, ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರು ಮಾಧ್ಯಮಗಳ ಮೂಲಕ ಬಯಲು ಮಾಡಿದ ಸತ್ಯಾಂಶಗಳು ಅತ್ಯಂತ ಆಘಾತಕಾರಿಯಾಗಿವೆ. ಈ ಕುರಿತು ಪೂರ್ಣ ಸತ್ಯ ಹೊರಬರಲು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ಒತ್ತಾಯಿಸಿದ್ದಾರೆ.
ಸೈನಿಕರನ್ನು ಸಾಗಿಸಲು ಕೋರಿಕೊಂಡರೂ 4-5 ವಿಮಾನಗಳ ವ್ಯವಸ್ಥೆಯನ್ನು ಮಾಡದೇ 40 ಸೈನಿಕರ ಅಮೂಲ್ಯ ಜೀವಗಳು ಬಲಿಯಾಗಲು ಕಾರಣರಾದ ಗೃಹ ಸಚಿವರನ್ನು ಹೊಣೆಗಾರರನ್ನಾಗಿ ಮಾಡಲು ಇಚ್ಚಾಶಕ್ತಿ ತೋರಿಸದ ಪ್ರಧಾನಿಗಳ ಧೋರಣೆಯ ಕುರಿತೂ ಮಾಜಿ ರಾಜ್ಯಪಾಲರು ನಿರ್ದಾಕ್ಷಿಣ್ಯವಾಗಿ ಮಾತನಾಡಿದ್ದಾರೆ. ಈ ಲೋಪವನ್ನು ಪ್ರಧಾನಿಗಳ ಗಮನಕ್ಕೆ ತಂದರೂ, ಬರಲಿದ್ದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ರಾಜ್ಯಪಾಲರನ್ನು ಮೌನವಾಗಿರುವಂತೆ ಸೂಚಿಸಿದ್ದರು ಎಂದು ವರದಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಅವರು ಗೋವಾದ ರಾಜ್ಯಪಾಲರಾಗಿದ್ದಾಗ ಅಲ್ಲಿನ ಸರ್ಕಾರದಲ್ಲಿದ್ದ ಭ್ರμÁ್ಟಚಾರವನ್ನು ಪ್ರಧಾನಿಗಳ ಗಮನಕ್ಕೆ ತಂದಾಗಲೂ ಸುಮ್ಮನಿರುವಂತೆ ಸೂಚಿಸಿದ್ದೇ ಅಲ್ಲದೆ ಮೇಘಾಲಯಕ್ಕೆ ರಾಜ್ಯಪಾಲರಾಗಿ ವರ್ಗಾಯಿಸಲಾಯಿತು ಎಂದು ವರದಿಯಾಗಿದೆ.. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಸತ್ಯವು ಜನರ ಮುಂದೆ ಬಹಿರಂಗವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.