ಪಿ.ಎಂ.ಕಿಸಾನ್ ಯೋಜನೆ:ಇ.ಕೆ.ವೈ.ಸಿ. ಮಾಡಲು ಜೂ. 30 ಕೊನೆ ದಿನ

ಕಲಬುರಗಿ,ಜೂ.19: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 01-04-2023ರಿಂದ ಬಾಕಿ ಇರುವ 14ನೇ ಕಂತಿನ ಸಹಾಯಧನ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಇದೂವರೆಗೆ ಇ-ಕೆ.ವೈ.ಸಿ. ಮಾಡಿಸದ ರೈತರು ಯೋಜನೆಯ ಆರ್ಥಿಕ ಸೌಲಭ್ಯ ಪಡೆಯಲು ಕೂಡಲೆ ಇ.ಕೆ.ವೈ.ಸಿ. ಮಾಡಿಸಲು ಕೋರಿದೆ. ಇ.ಕೆ.ವೈ.ಸಿ. ಮಾಡಿಸಲು ಇದೇ ಜೂನ್ 30 ಕೊನೆ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

ಒಂದು ವೇಳೆ ಇ.ಕೆ.ವೈ.ಸಿ. ಮಾಡಿಸದಿದ್ದಲ್ಲಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ ಸಿಗುವ 6,000 ರೂ. ಸಹಾಯಧನ ಸಿಗುವುದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 75,562 ರೈತರು ಪಿ.ಎಮ್. ಕಿಸಾನ್ ಯೋಜನೆಯಡಿ ಇ-ಕೆ.ವೈ.ಸಿ ಮಾಡಿಸಲು ಬಾಕಿ ಉಳಿದಿದ್ದು, ಕೂಡಲೆ ಇ.ಕೆ.ವೈ.ಸಿ. ಮಾಡಿಸುವಂತೆ ಅವರು ಮನವಿ ಮಾಡಿದ್ದಾರೆ.

ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಹಾಗೂ ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಓನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓ.ಟಿ.ಪಿ ಮೂಲಕ ಇ-ಕೆ.ವೈ.ಸಿ. ಮಾಡಿಸಬಹುದು.

ಇದಲ್ಲದೆ ಹತ್ತಿರದ ಅಂಚೆ ಕಛೇರಿಗೆ ಭೇಟಿ ಮಾಡಿ ಪೆÇೀಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಅಥವಾ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪಿ.ಎಂ.-ಕಿಸಾನ್ ಮೋಬೈಲ್ ತಂತ್ರಾಂಶವನ್ನು ಮೋಬೈಲ್‍ನ ಪ್ಲೇಸ್ಟೋರ್‍ನಿಂದ ಡೌನಲೋಡ್ ಮಾಡಿಕೊಂಡು ಸ್ವತ ಫಲಾನುಭವಿಗಳ ತಮ್ಮ ಮುಖ ಚಹರೆ ತೋರಿಸುವ ಮೂಲಕ ಇ-ಕೆ.ವೈ.ಸಿ. ಮಾಡಿಕೊಳ್ಳಬಹುದು. ಇನ್ನು ಅಕ್ಕಪಕ್ಕದ ರೈತರಿಗೆ ಇ.ಕೆ.ವೈ.ಸಿ. ಮಾಡಿಸಿಕೊಳ್ಳಲು ರೈತ ಬಾಂಧವರು ತಿಳಿಸಬೇಕು ಎಂದು ಅವರು ಕೋರಿದ್ದಾರೆ.