ಪಿಎಸ್ ಐ ನೇಮಕಾತಿ ಹಗರಣ: ಹೈಕೋರ್ಟ್ ತೀರ್ಪು ಸ್ವಾಗತಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ನ.10:ಕರ್ನಾಟಕದ ಉಚ್ಚ ನ್ಯಾಯಾಲಯ PSI ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಚಿವರು
ಹಿಂದೆ ನಡೆದಿರುವ 545 ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಸಂಪೂರ್ಣ ರದ್ದುಗೊಳಿಸಲು ಆದೇಶಿಸಿ ಸ್ವತಂತ್ರ ಸಂಸ್ಥೆಯಿಂದ ಮತ್ತೆ ಮರುಪರೀಕ್ಷೆ ನಡೆಸಬೇಕು ಎಂದು ಆದೇಶಿಸಿರುವುದು ಹಿಂದಿನ ಬಿಜೆಪಿ ಸರ್ಕಾರದ ದುಷ್ಟ ಆಡಳಿತಕ್ಕೆ ಉಚ್ಚ ನ್ಯಾಯಾಲಯದ ಸಾಕ್ಷಿ ಮುದ್ರೆಯಾಗಿದೆ.

ಪರೀಕ್ಷೆಯಲ್ಲಿ ಅಕ್ರಮ ನಡೆದೇ ಇಲ್ಲಾ ಎಂದು ಹಲವಾರು ಬಾರಿ ಸದನಕ್ಕೆ ವಾದಿಸಿದ್ದ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಾಗೂ ಪ್ರಕರಣವನ್ನು ಹಳ್ಳ ಹಿಡಿಸಲು ತನಿಖೆ ಮೇಲೆ ಪ್ರಭಾವ ಬೀರಿದ ಮತ್ತು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ್ದ ಅಂದಿನ ಬಿಜೆಪಿ ಸಚಿವರಿಗೆ ಛೀಮಾರಿ ಹಾಕಿದಂತೆ ಎಂದು ಹೇಳಿದ್ದಾರೆ.

ಆಗಿರುವ ಅಕ್ರಮದ ಸಂಪೂರ್ಣ ಚಿತ್ರಣವನ್ನು ನ್ಯಾಯಲಯಕ್ಕೆ ಸಮರ್ಥವಾಗಿ ಮನವರಿಕೆ ಮಾಡಿಸಿ 56,000ಕ್ಕೂ ಹೆಚ್ಚು ಆಕಾಂಕ್ಷಿಗಳ ಪರವಾಗಿ ತೀರ್ಪು ಬರುವಂತೆ ಮಾಡಿರುವ ನಮ್ಮ ಸರ್ಕಾರದ ವಕೀಲರ ತಂಡಕ್ಕೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಗೆಲುವು ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧ ಸಿಡಿದೆದ್ದು ಸಂಘಟಿತರಾಗಿ, ಪ್ರಕರಣವನ್ನು ಮುನ್ನಲೆಗೆ ತರಲು ಹೋರಾಡಿದ ಎಲ್ಲಾ ನ್ಯಾಯಯುತ ಪಿಎಸ್ಐ ಉದ್ಯೋಗ ಆಕಾಂಕ್ಷಿಗಳ ಗೆಲುವಾಗಿದೆ ಎಂದು ಅವರು ಹೇಳಿದ್ದಾರೆ.