
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಮತ್ತು ದುರಸ್ತಿ, ಕಾರ್ಯದ 131 ಜನ ನೌಕರರು
ತಮ್ಮನ್ನು ಖಾಯಂಗೊಳಿಸಿವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟಾವಧಿಯ ಆಹೋರಾತ್ರಿ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ.
ಇದರಿಂದ ನಗರದಲ್ಲಿ ನೀರು ಸರಬರಾಜು ಪ್ರಕ್ರಿಯೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದಿಂದ ರಾಜ್ಯಾದ್ಯಂತ ಈ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ.
ಈ ಹಿನ್ನಲೆಯಲ್ಲಿ ನಗರದಲ್ಲಿ ನೀರು ಸರಬರಾಜು ಮತ್ತು ದುರಸ್ತಿ ಕಾರ್ಮಿಕರ, ಸಂಘದ ಹೊರಗುತ್ತಿಗೆ ನೌಕರರು ಧರಣಿ ಆರಂಭಿಸಿದ್ದಾರೆ. ಕಳೆದ 20 ವರ್ಷಗಳಿಂದ ನಗರಸಭೆ ಮತ್ತು ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಲೇ ಇದ್ದೇವೆ. ಕಳೆದ ಹಲವು ದಿನಗಳಿಂದ ನೇರ ನೇಮಕಾತಿ ಮತ್ತು ನೇರವೇತನ ನೌಕರರ ನೇಮಕಕ್ಕೆ ಆದೇಶ ಹೊರಡಿಸಿದ್ದಾರೆ. ಆದರೆ ನಮ್ಮನ್ನು ಮಾತ್ರ ಇದರಿಂದ ವಂಚಿತರನ್ನಾಗಿ ಮಾಡಲಾಗಿದೆ.
ನೇರ ನೇಮಕಾತಿ, ನೇರ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು,ಗುತ್ತಿಗೆ ಪದ್ದತಿ ರದ್ದು ಮಾಡಬೇಕು ಎಂದು ನೌಕರರು ಘೋಷಣೆ ಕೂಗಿದರು.
ರಾಜ್ಯ ಸರ್ಕಾರ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ನಡುವೆ ತಾರತಮ್ಯ ಉಂಟುಮಾಡುತ್ತಿರುವುದು ಬೇಸರದ ಸಂಗತಿ. ಈ ಬಾರಿಯ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ನಂಬಿಕೆ ಇತ್ತು. ಆದರೆ ಸರ್ಕಾರವು ಈಡೇರಿಸಿಲ್ಲ ಅದಕ್ಕಾಗಿ ನಾವು ಮತ್ತು ಮುಷ್ಕರ ಆರಂಭಿಸಿದ್ದೇವೆಂದು ನೌಕರರು ಹೇಳುತ್ತಿದ್ದಾರೆ.
ಮುಷ್ಕರಕ್ಕೆ ಎಐಟಿಯುಸಿಯ ಜೆ.ಸತ್ಯಬಾಬು ಬೆಂಬಲವ್ಯಕ್ತಪಡಿಸಿ ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದರು.
ಧರಣಿಯಲ್ಲಿ ಸಂಘದ ಅಧ್ಯಕ್ಷ ಎನ್.ಅಂಜಿನಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಗೋಪಿ, ಸಹಾಯಕ ಕಾರ್ಯದರ್ಶಿಗಳಾದ ಲಕ್ಷ್ಮೀ, ನಾಗಲಕ್ಷ್ಮಿ, ಸಂಘಟನಾ ಕಾರ್ಯದರ್ಶಿ ರಾಮಸ್ವಾಮಿ, ರಾಮಾಂಜನೇಯಲು, ಕೆ.ಶ್ರೀನಿವಾಸಲು ಮೊದಲಾದವರು ಪಾಲ್ಗೊಂಡಿದ್ದರು.
ಪಾಲಿಕೆಯಲ್ಲಿ ಆರೇಳು ಜನಮಾತ್ರ ಖಾಯಂ ನೌಕರರಿದ್ದು ಇದರಿಂದಾಗಿ ನೀರು ಸರಬರಾಜಿನಲ್ಲಿ ಭಾರಿ ವ್ಯತ್ಯಯ ಆಗುವ ಸಾಧ್ಯತೆ ಇದೆ.