ಪರ್ಸೆಂಟ್ ಮಜಾ ಮಾಡಿ ಆರೋಪ ಸಲ್ಲದು: ದಿನೇಶ್ ಗುಂಡುರಾವ್

ಮೈಸೂರು: ಜೂ.28:- ಮಾಜಿ ಸಚಿವ ಈಶ್ವರಪ್ಪ 40,50 ಪಸೆರ್‍ಂಟ್ ಮಜಾ ಮಾಡಿ ಈಗ ಕಾಂಗ್ರೆಸ್‍ನಿಂದ ಬಂದವರಿಂದ ಪಾರ್ಟಿ ಹಾಳಾಯಿತು ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.
ತಮ್ಮ ಇಲಾಖೆ ಆಸ್ಪತ್ರೆಗಳ ಪರಿಶೀಲನೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ಮೈಸೂರಿಗೆ ಆಗಿಮಿಸಿದ ಸಚಿವರು ನಗರದ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ ಎದ್ದಿರುವ ಆಂತರಿಕ ವಾಗ್ಯುದ್ಧದ ಕುರಿತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‍ನಿಂದ ಬಂದವರಿಂದ ಬಿಜೆಪಿ ಹಾಳಾಯಿತು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಈಶ್ವರಪ್ಪ ಬಿಜೆಪಿ ಸರ್ಕಾರದಲ್ಲಿ 40,50 ಪಸೆರ್‍ಂಟ್ ಪಡೆದು ಮಜಾ ಮಾಡಿ ಈಗ ಮಾತನ್ನು ಹೇಳಿದರೆ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಕೊರೋನ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತ ಘಟನೆಯಲ್ಲಿ ಲೋಪವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.ಈ ಸಂಬಂಧ ತನಿಖೆ ಕೈಗೊಳ್ಳಲು ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ನಡೆಸಲಾಗಿದ್ದು, ಯಾವ ರೀತಿ ಮತ್ತು ಯಾವ ಹಂತದಲ್ಲಿ ತನಿಖೆ ನಡೆಸಬೇಕು ಅದನ್ನು ತಿಳಿಸಯವಂತೆ ಸೂಚಿಸಿದ್ದಾರೆ. ಈಗಾಗಲೆ ಅದರ ಬಗ್ಗೆ ಚಾರ್ಚಸ್ ಅನ್ನು ಕೈಗೊಳ್ಳಲು ಮುಂದಾಗಿದ್ದೇವೆ. ಶೀಘ್ರದಲ್ಲೇ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬರಿ ಕೆಳಹಂತದ ಅಧಿಕಾರಿಗಳಿಂದಷ್ಟೇ ಲೋಪವಾಗಿಲ್ಲ, ಮೇಲ್ಮಟ್ಟದ ಅಧಿಕಾರಿಗಳಿಂದಲೂ ಲೋಪವಾಗಿದೆ. ಹಾಗಾಗಿ ಯಾವ ಹಂತದಲ್ಲಿ ತನಿಖೆ ಮಾಡಬೇಕು ಅದನ್ನು ಮಾಡಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡಲು ಸರ್ಕಾರವೇ ಅನುಮತಿ ನೀಡಿತ್ತು. ಇದರಿಂದ ಕೆಲವು ಕಡೆಗಳಲ್ಲಿ ಅನಾನುಕೂಲ ಉಂಟಾಗುತ್ತಿದ್ದು. ಗುತ್ತಿಗೆ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಹೊಸ ಆಸ್ಪತ್ರೆಗಳ ನಿರ್ಮಾಣದ ಮೊದಲು ಇರುವ ಆಸ್ಪತ್ರೆಗಳನ್ನೇ ಉತ್ತಮ ಮಟ್ಟದಲ್ಲಿ ಸುಧಾರಣೆ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ಇರುವ ವೈದ್ಯರ ಕೊರತೆ, ಸಿಬ್ಬಂದಿಗಳ ಕೊರತೆ ಮತ್ತು ತಾಂತ್ರಿಕವಾಗಿ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿ ಈಗ ಬಿಡುಗಡೆಗೊಳಿಸಲಾಗಿರುವ ಆಯುಷ್ ವೈದ್ಯರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದೇ ಎಂಬ ಪ್ರಶ್ನೆಗೆ. ಇದನ್ನು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಸಚಿವರನ್ನು ಮೈಸೂರು ನಗರ ಕಾಂಗ್ರೆಸ್ ವತಿಯಿಂದ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಆರೋಗ್ಯ ಇಲಾಖೆ ಆಯುಕ್ತ ರಣದೀಪ್, ಸಚಿವರ ಆಪ್ತ ಕಾರ್ಯದರ್ಶಿ ಕೆ.ಎ.ಹಿದಾಯತುಲ್ಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್, ಸೇರಿದಂತೆ ಹಿರಿಯ ಅಧಿಕಾರಿಗಳು ಜೊತೆಯಲ್ಲಿದ್ದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಅಯೂಬ್ ಖಾನ್, ಶಿವಣ್ಣ, ರವಿಶಂಕರ್, ಡಾ.ಸುಜಾತ, ನವೀನ್ ಕುಮಾರ್, ಮೈಸೂರು ಬಸವಣ್ಣ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು. ನಂತರ ಸಚಿವರು ಕೆ.ಆರ್.ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಐ.ಸಿ.ಯು. ಟೆಲಿ ಹಬ್ ಉದ್ಘಾಟಿಸಿ, ಜಿಲ್ಲೆಯ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಸುಸ್ಥಿತಿಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಮೇಟಗಳ್ಳಿ ಬಳಿ ಇರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.