
ಅರಕೇರಾ,ಏ.೦೪- ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಪರೀಕ್ಷಾರ್ಥಿಗಳು ಅನಗತ್ಯ ಗೊಂದಲಕ್ಕೀಡಾಗಬಾರದು ಎಂದು ಡೈಯಟ್ ಉಪನಿರ್ದೇಶಕ (ಅಭಿವೃದ್ಧಿ ವಿಭಾಗ) ಬಿ.ಕೆ ನಂದನೂರು ಹೇಳಿದರು.
ಪಟ್ಟಣದಲ್ಲಿರುವ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಗುಣಮಟ್ಟ ಶಿಕ್ಷಣ ನೀಡಲಾಗಿದೆ. ಉತ್ತಮವಾಗಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆಗೆ ಹೆದರುವ ಆತಂಕವಿಲ್ಲ. ಪರೀಕ್ಷಾ ಕೇಂದ್ರಗಳು ಅತ್ಯುತ್ತಮ ವಾತಾವರಣದಲ್ಲಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಎಲ್ಲ ಭದ್ರತೆ ಮಾಡಿಕೊಳ್ಳಲಾಗಿದೆ. ಪಾರದರ್ಶಕವಾಗಿ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮರಾ, ಪೋಲಿಸ್ ಸಿಬ್ಬಂದಿ, ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಪರೀಕ್ಷಾ ನಿಯಮದ ಪ್ರಕಾರ ಸುಸೂತ್ರವಾಗಿ ಪರೀಕ್ಷೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ವೇಳೆ ಬಿಇಒ ಸುಖದೇವ್, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಅಕ್ಷರ ದಾಸೋಹ ಅಧಿಕಾರಿ ಬಂದೋಲಿಸಾಬ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಮುಖ್ಯ ಅಧೀಕ್ಷಕ ಕುಮಾರಸ್ವಾಮಿ ಹಿರೇಮಠ ಇತರರಿದ್ದರು.