
ಸಂಜೆವಾಣಿ ವಾರ್ತೆ
ಸಂಡೂರು:ಜು: 15: ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ, ಇಂದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಹೆಚ್ಚಾಗುತ್ತಿದೆ, ಅದ್ದರಿಂದ ಅಂಗಡಿಗಳಲ್ಲಿ ಮಿತಿಮೀರದ ಬಳಕೆಯಾಗುತ್ತಿದ್ದು ಅದನ್ನು ತಡೆಯಲು ಜಾಗೃತಿ ಮತ್ತು ದಿಢೀರ್ ಭೇಟಿಯಿಂದ ವಶಪಡಿಸಿಕೊಳ್ಳುವ ಮೂಲಕ ಕಡಿಮೆ ಮಾಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದೇವೆ ಅದಕ್ಕೆ ಸಾರ್ವಜನಿಕರ ಸಹಕಾರವೂ ಸಹ ಅತಿ ಅಗತ್ಯ ಎಂದು ಪುರಸಭೆಯ ಮುಖ್ಯಾಧಿಕಾರಿ ಕೆ.ಜಯಣ್ಣ ತಿಳಿಸಿದರು.
ಅವರು ಪಟ್ಟಣದ ಪುರಸಭೆ ಬಸ್ನಿಲ್ದಾಣದಲ್ಲಿ ಪುರಸಭೆಯ ವತಿಯಿಂದ ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ನಾವು ನಿತ್ಯ ಅಹಾರವನ್ನೂ ಸಹ ಪ್ಲಾಸ್ಟಿಕ್ನಲ್ಲಿಯೇ ಬಳಸುತ್ತಿರುವುದರಿಂದ ಕ್ಯಾನ್ಸ್ರನಂತಹ ರೋಗಗಳು ಹೆಚ್ಚಾಗುತ್ತದೆ, ಅಲ್ಲದೆ ಬಹು ಪ್ಲಾಸ್ಟಿಕ್ ಬಳಕೆಯಿಂದ ಮಣ್ಣು ಮಾಲಿನ್ಯವಾಗುತ್ತಿದೆ, ಇದನ್ನು ವಿಂಗಡಿಸುವಂತಹ ಕಾರ್ಯವನ್ನು ಪುರಸಭೆಯಿಂದ ಕೈಗೊಂಡಿದ್ದು ಒಣಕಸ ಮತ್ತು ಹಸಿಕಸವನ್ನು ಪ್ರತ್ಯೇಕವಾಗಿ ಸಂಗ್ರಹಿದಾಗ ಅತಿ ಹೆಚ್ಚು ಪ್ಲಾಸ್ಟಿಕ ಸಂಗ್ರಹವಾಗುವುದನ್ನು ಕಾಣುತ್ತೇವೆ, ಅದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಪ್ಲಾಸ್ಟಿಕ ಬಳಕೆಯನ್ನು ನಿಲ್ಲಿಸುವ ಮೂಲಕ ಆರೋಗ್ಯ ರಕ್ಷಣೆ ಮತ್ತು ಪರಿಸರ ಮಾಲಿನ್ಯವನ್ನು ತಡೆಯಬೇಕು ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿ ಪ್ರಭುರಾಜ್ ಹಗರಿಯವರು ಮಾತನಾಡಿ ಪ್ಲಾಸ್ಟಿಕ ಬಳಕೆ ಮಿತಿಮೀರಿದ್ದು ಅದನ್ನು ತಡೆಯಲು ಪಟ್ಟಣದ ಎಲ್ಲಾ ವ್ಯಾಪಾರಿಗಳೊಂದಿಗೆ ಸಂಪರ್ಕಿಸಿ ಕಡ್ಡಾಯವಾಗಿ ನಿಗದಿತವಾದ ಚೀಲಗಳನ್ನೇ ನೀಡಬೇಕು, ಪ್ಲಾಸ್ಟಿಕ ನಿಷೇಧ ಎಂದು ಮಾಹಿತಿ ನೀಡಿ, ಕದ್ದು ವ್ಯಾಪಾರಮಾಡುವವರಿಗೆ ದಂಡಹಾಕಲಾಗುತ್ತಿದೆ, ಅಲ್ಲದೆ ಅವರಲ್ಲಿದ್ದ ಸಂಗ್ರಹವನ್ನು ಸೀಜ್ ಮಾಡುವ ಮೂಲಕ ವಶಪಡಿಸಿಕೊಳ್ಳುತ್ತೇವೆ, ಇನ್ನೂ ಸಾರ್ವಜನಿಕರು ಸಹ ಕಡ್ಡಾಯವಾಗಿ ಹಾಲು, ಆಹಾರ, ತರಕಾರಿ, ಇತರ ಸಾಮಾಗ್ರಿಗಳನ್ನು ತರಲು ಬಟ್ಟೆಯ ಚೀಲಗಳನ್ನು ಕಡ್ಡಾಯವಾಗಿ ಬಳಸುವ ಮೂಲಕ ಮಾಲಿನ್ಯವನ್ನು ತಡೆಯಬೇಕು, ಪ್ಲಾಸ್ಟಿಕ್ ಕರಗದ ವಸ್ತುವಾಗಿದ್ದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸ್ಯಾನಿಟರಿ ಇನ್ಸಪೆಕ್ಟರ್ ಶಿವರಂಜಿನಿ, ಮಹಿಳಾ ಸ್ತ್ರೀಶಕ್ತಿ ಸಂಘದ ಸದಸ್ಯರು, ಪುರಸಭೆಯ ಸಿಬ್ಬಂದಿಗಳು ಮೆರವಣಿಗೆ ಮಾಡುವ ಮೂಲಕ ಜಾಗೃತಿಯನ್ನು ಉಂಟುಮಾಡಿ ಪ್ಲಾಸ್ಟಿಕ ಬಳಕೆ ನಿಲ್ಲಿಸಿ ಎಂದು ಕರೆನಿಡಿದರು.