ಪರಿಶ್ರಮದಿಂದ ಸಾಧನೆ ಸಾಧ್ಯ: ಶಹಾಬಾದಕರ್

ಬೀದರ್: ಎ.28:ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ಡೈಮಂಡ್ ಗ್ರುಪ್ ಆಫ್ ಇನ್‍ಸ್ಟಿಟ್ಯೂಷನ್ಸ್‍ನ ವಿದ್ಯಾರ್ಥಿಗಳನ್ನು ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ರಾಜ್ಯಕ್ಕೆ 8ನೇ ರ್ಯಾಂಕ್ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ಸ್ಥಾನ ಗಳಿಸಿದ ಶುಂಭಾಗಿ ಭರತರಾವ್ ಬಿರಾದಾರ ಹಾಗೂ ಇತರ ಸಾಧಕ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಅವರು, ಗುರಿ ಇಟ್ಟುಕೊಂಡು ಪರಿಶ್ರಮ ವಹಿಸಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.

ಕಾಲೇಜಿನ 19 ವಿದ್ಯಾರ್ಥಿಗಳು ಶೇ 95 ರಷ್ಟು, 179 ವಿದ್ಯಾರ್ಥಿಗಳು ಶೇ 90 ರಷ್ಟು ಹಾಗೂ 412 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಡೈಮಂಡ್ ಗ್ರುಪ್ ಆಫ್ ಇನ್‍ಸ್ಟಿಟ್ಯೂಟ್ಸ್‍ನ ಯೆರ್ರಾಬೆಲ್ಲಿ ಮಾಧವರಾವ್ ನುಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲಕುಮಾರ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಜಶೇಖರ ಮಂಗಲಗಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಸಂಗನಬಸವ ಗೋರ್ಟಾ, ಡೈಮಂಡ್ ಗ್ರುಪ್ ಆಫ್ ಇನ್‍ಸ್ಟಿಟ್ಯೂಷನ್ಸ್‍ನ ಸಂಸ್ಥಾಪಕ ಎಸ್.ಕೆ. ಮಸ್ತಾನ್ ವಲಿ, ನಿರ್ದೇಶಕರಾದ ರಜನಿ ಮಾಧವರಾವ್, ಅಶ್ವಿನ್ ಭೋಸ್ಲೆ, ಆಡಳತಾಧಿಕಾರಿ ಮಂಜುನಾಥ ನೀಲಂಗೆ, ಡಾ. ಸಂಜೀವಕುಮಾರ ಬಿರಾದಾರ, ಪ್ರಭು ಎಸ್, ಓಂಕಾರ ಸೂರ್ಯವಂಶಿ, ಶಿವರಾಜ ಪಾಟೀಲ ಇದ್ದರು.

ಉಪನ್ಯಾಸಕ ಭೀಮರಾವ್ ನಿರೂಪಿಸಿದರು. ಉಪ ಪ್ರಾಚಾರ್ಯೆ ಸುನಂದಾ ಬಿರಾದಾರ ವಂದಿಸಿದರು.