ಪತ್ರಿಕೊದ್ಯಮ ವಿದ್ಯಾರ್ಥಿಗಳು ತಂತ್ರಜ್ಞಾನದ ಕೌಶಲ್ಯ ಅಳವಡಿಸಿಕೊಳ್ಳಿ: ಪ್ರೊ. ದಯಾನಂದ ಅಗಸರ್

ಕಲಬುರಗಿ,ಸೆ.25: ಪತ್ರಿಕೊದ್ಯಮ ವಿದ್ಯಾರ್ಥಿಗಳು ತಂತ್ರಜ್ಞಾನದ ಕೌಶಲ್ಯವನ್ನು ಸದುಪಯೋಗದೊಂದಿಗೆ ಪ್ರಯೋಗಿಸಿದ ಅವಿಷ್ಕಾರ ಮತ್ತು ಸಾಧನೆಗಳು ಸಮಾಜದ ಜನರಿಗೆ ತಲುಪಿದಾಗ ಮಾತ್ರ ಹೆಚ್ಚು ಮಹತ್ವ ಮತ್ತು ಮೌಲ್ಯ ಸಿಗಲಿದೆ. ಪ್ರಸ್ತುತ ವೃತ್ತಿ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ಗ್ರಹಿಸಿಕೊಂಡು ನಿರಂತರ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಹೊಸತನ ರೂಢಿಸಿಕೊಂಡರೆ ಹೆಚ್ಚು ಸಾಧನೆ ಮಾಡಬಹುದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಿದ ‘ವಿಶ್ವ ಛಾಯಾಗ್ರಹಣ ಹಾಗೂ ಶಿಕ್ಷಕರ ದಿನಾಚರಣೆ ಮತ್ತು ಮಲ್ಟಿಮೀಡಿಯಾ ಸೆಂಟರ್‍ನ ಯುಟ್ಯೂಬ್ ಚಾನೆಲ್ ಬಿಡುಗಡೆ’ ಕಾರ್ಯಕ್ರಮವನ್ನು ಸಾವಿತ್ರಿ ಬಾಯಿಪುಲೆ ಮತ್ತು ಸರ್ವಪಲ್ಲಿ ರಾಜಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಭಾಗದ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿದ್ದಾರೆ. ವಿದ್ಯಾರ್ಥಿಗಳು ಪತ್ರಿಕೋದ್ಯಮ ಶಿಕ್ಷಣ ಕಲಿತು ಪತ್ರಕರ್ತರಾಗುವ ಉದ್ದೇಶವಿರುವ ವಿದ್ಯಾರ್ಥಿಗಳ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಜವಾಬ್ದಾರಿ ಪತ್ರಿಕೋದ್ಯಮ ಶಿಕ್ಷಕರ ಮೇಲಿದೆ. ಪತ್ರಿಕೋದ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಛಾಯಾಗ್ರಹಣ ಕಲೆ ವಿಭಿನ್ನ ವೃತ್ತಿಯಾಗಿದ್ದು ಛಾಯಾಗ್ರಾಹಕ ವೃತ್ತಿ ಕಲೆಯ ಅನುಭವ ಪಡೆಯುವುದು ಅಷ್ಟೇ ಅವಶ್ಯಕ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ಕೃತಕ ಬುದ್ಧಿಮತ್ತೆ ಕನ್ನಡ ಸುದ್ದಿ ನಿರೂಪಕಿ ಸೃಷ್ಠಿ ಕಾರ್ಯವನ್ನು ಪ್ರಸ್ತಾಪಿಸಿದ ಅವರು ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಾಧನೆ ಕಾರ್ಯಕ್ಕೆ ಅಭಿನಂದಿಸಿದರು. ಪತ್ರಕರ್ತರಾಗುವ ವಿದ್ಯಾರ್ಥಿಗಳು ಛಾಯಾಗ್ರಹಣ ಕಲೆ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಲಬುರಗಿ ಕನ್ನಡ ಪ್ರಭ ದಿನಪತ್ರಿಕೆ ವಿಶೇಷ ಪ್ರತಿನಿಧಿ ಶೇಷಮೂರ್ತಿ ಅವಧಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಾಧ್ಯಮ ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದರ ಜೊತೆಗೆ ವೃತ್ತಿರಂಗದಲ್ಲಿನ ನಾವೀನ್ಯತೆ ಬೆಳವಣಿಗೆ, ಭಾಷಾ ಕೌಶಲ್ಯಗಳನ್ನು ನಿರಂತರವಾಗಿ ಅಭ್ಯಾಸ ಮಾಡಿಕೊಂಡರೆ ಉತ್ತಮ ಅವಕಾಶಗಳನ್ನು ಪಡೆಯಬಹುದು ಎಂದ ಅವರು ಪತ್ರಿಕೊದ್ಯಮ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶಗಳು ಸೃಷ್ಠಿಯಾಗಿವೆ. ಅದರಲ್ಲಿ ನೀವು ಯಶಸ್ವಿಯಾಗಬೇಕಾದರೆ ಕಲಿಕಾ ಆಸಕ್ತಿ ಜೊತೆಗೆ ವೃತ್ತಿ ಪ್ರಜ್ಞೆ ಮತ್ತು ವೃತ್ತಿ ಅನುಭವ ಪಡೆಯುವುದು ಅಗತ್ಯವಿದೆ ಎಂದರು.
ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಅವರು ವಿಶೇಷ ಉಪನ್ಯಾಸ ನೀಡಿದರು. ಪತ್ರಿಕಾ ಛಾಯಾಚಿತ್ರಗಳನ್ನು ಓದುಗರು ಹೆಚ್ಚು ವೀಕ್ಷಿಸುವುದರಿಂದ ಸುದ್ದಿ ಸುಲಭವಾಗಿ ಅರ್ಥವಾಗುತ್ತದೆ. ಒಬ್ಬ ಅತ್ಯುತ್ತಮ ಛಾಯಾಗ್ರಾಹಕ ಸೂಕ್ಷ್ಮ ಸಂವೇದನೆಯಿರುವ ಚಿತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಲು ಸಾಧ್ಯವಿದೆ. ಛಾಯಾಗ್ರಾಹಕ ವೃತ್ತಿ ಒಂದು ಸವಾಲಿನ ವೃತ್ತಿಯಾಗಿದ್ದು ಸಮಯ ಪ್ರಜ್ಞೆ ಮತ್ತು ತಾಳ್ಮೆಯಿಂದ ನಿಭಾಯಿಸುವ ಲಕ್ಷಣಗಳು ಇರಬೇಕಾಗುತ್ತದೆ. ಸಮಕಾಲೀನ ಛಾಯಾಚಿತ್ರಗಳ ಮೂಲಕ ಸತ್ಯ ಸಂಗತಿ ಮತ್ತು ಸಮಸ್ಯೆಗಳನ್ನು ಸಮಾಜಕ್ಕೆ ತೋರಿಸುವುದರ ಜೊತೆಗೆ ಛಾಯಾಗ್ರಾಹಕರು ಹಲವಾರು ಸಮಸ್ಯೆಗಳಿಗೆ ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದರು.
ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ ಬೈರಪ್ಪ ಮಾತನಾಡಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪತ್ರಿಕೆ ಮತ್ತು ಟೆಲಿವಿಷನ್ ಚಾನೆಲ್‍ಗಳ ಕೇಂದ್ರ ಸ್ಥಾನದ ಕಾರ್ಯಚಟುವಟಿಕೆಗಳ ಜ್ಞಾನ ಅತಿ ಅವಶ್ಯವಿದೆ. ಅಲ್ಲಿ ವೃತ್ತಿ ಸಂಬಂಧಿಸಿದ ವಿಶೇಷ ಜ್ಞಾನ ಪಡೆದುಕೊಳ್ಳುವುದು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ವಿಶೇಷ ಉಪನ್ಯಾಸ ಹಾಗೂ ವೃತ್ತಿ ಕೌಶಲ್ಯ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುವುದು. ವೃತ್ತಿ ತರಬೇತಿ ಮೂಲಕ ಪತ್ರಕರ್ತರಾಗಲು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಮಲ್ಟಿ ಮೀಡಿಯಾ ಸೆಂಟರ್‍ನ ಛಾಯಾಗ್ರಾಹಕ ಮತ್ತು ಕಲಾವಿದ ಗುರುಚೌಹಾಣ, ವಿಡಿಯೋಗ್ರಾಫರ್ ಶರಣುನಾವಿ, ಆನ್‍ಲೈನ್ ಸಂಕಲನಕಾರ ಮಹೇಶ್ ಶ್ರೀಗಣಿ ಹಾಗೂ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ, ಡಾ. ಕೆ. ಎಂ. ಕುಮಾರಸ್ವಾಮಿ, ಶ್ರೀಮತಿ. ರೀತು ತಳವಾರ, ಡಾ. ರಾಜಕುಮಾರ್ ದಣ್ಣೂರು, ಡಾ. ಅಶೋಕ್ ಶರಣಪ್ಪ ಇವರನ್ನು ಸನ್ಮಾನಿಸಲಾಯಿತು.
ಆರ್ಟಿಪಿಸಿಯಲ್ ಇಂಟಲಿಜನ್ಸ್ (ಕೃತಕ ಬುದ್ಧಿಮತ್ತೆ) ಅಧ್ಯಯನ ಕೈಗೊಂಡು ನಿರ್ಮಾಣ ಕಾರ್ಯ ನಿರ್ವಹಿಸಿದ ಶ್ರವಣಯೋಗಿ ಹಿರೇಮಠ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಶೋಧನಾ ವಿದ್ಯಾರ್ಥಿ ಆನಂದ್ ಎಂ ಯಾತನೂರ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ದೃಶ್ಯಕಲಾ ವಿಭಾಗ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅತಿಥಿ ಉಪನ್ಯಾಸಕ ಡಾ. ಕೆ.ಎಂ. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶೋಕ ಅತಿಥಿಗಳನ್ನು ಸ್ವಾಗತಿಸಿದರು. ಸಾಬಣ್ಣ ನಂದಿಹಳ್ಳಿ ಹಾಗೂ ಅರುಣ್ ಕುಮಾರ್ ಅತಿಥಿ ಪರಿಚಯಿಸಿದರು. ಬೌರಮ್ಮ ಪ್ರಾರ್ಥಿಸಿದರು. ಅರುಣ್‍ಕುಮಾರ್ ಹೆರೂರ ವಂದಿಸಿದರು. ಭೀಮಾಶಂಕರ್ ಜಳಕಿ ಕಾರ್ಯಕ್ರಮ ನಿರೂಪಿಸಿದರು.