ಶಿವಮೊಗ್ಗ.ಮೇ.೩೧: ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾಧ್ಯಮ ರಂಗ, ಪತ್ರಿಕಾ ರಂಗ ತನ್ನದೇ ಆದ ಜವಾಬ್ದಾರಿಯುತ ಕಾರ್ಯನಿರ್ವಹಿಸುತ್ತಿದ್ದು ಪತ್ರಿಕಾ ರಂಗಕ್ಕೆ ಹಾಗೂ ಪತ್ರಿಕಾ ವಿತರಕರಿಗೆ ಹೊಸ ಸರ್ಕಾರ ಸೌಲಭ್ಯಗಳನ್ನು ಬಿಡುಗಡೆ ಮಾಡುವ ಮೂಲಕ ಪತ್ರಿಕೆಯ ಉಳಿವಿಗಾಗಿ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್ ರವರು ನೂತನ ಸರ್ಕಾರಕ್ಕೆ ಮನವಿ ಮಾಡುವುದಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸರ್ಕಾರದ ಸಾಧನೆಗಳನ್ನು, ಸರ್ಕಾರದ ಲೋಪ ದೋಷಗಳನ್ನೂ ಸುದ್ದಿ ರೂಪದಲ್ಲಿ ಸಾರ್ವಜನಿಕ ಓದುಗರಿಗೆ ತಲುಪಿಸುವ ಕೆಲಸ ನಿರ್ವಹಿಸುತ್ತಿದೆ. ಸಮಾಜ ತಿದ್ದುವ ಕೆಲಸದ ಜೊತೆಗೆ ಸರ್ಕಾರ , ಅಧಿಕಾರಿಗಳು ಜನಪ್ರತಿನಿಧಿಗಳ ಕಾರ್ಯವೈಕರಿ , ಸರ್ಕಾರದ ಸಮಾರಂಭ ಹಾಗೂ ಮಹತ್ವದ ಯೋಜನೆಗಳ ಸುದ್ದಿ ಬಿತ್ತರಿಸುವುದರೊಂದಿಗೆ ಜೊತೆ ಜೊತೆಯಲ್ಲಿ ಸಾರ್ವಜನಿಕರ, ವಿರೋಧ ಪಕ್ಷಗಳ, ಸಂಘ ಸಂಸ್ಥೆಗಳ ಪ್ರತಿಭಟನೆ, ಮನವಿಗಳ ಬಗ್ಗೆ ಸವಿಸ್ತಾರವಾಗಿ ಯಾವುದೇ ಆಮಿಷಗಳಿಗೆ ಪತ್ರಿಕಾರಂಗ ಒಳಗಾಗದೆ ನೈಜ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸರ್ಕಾರದ ಗಮನ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.ದೃಶ್ಯ ಮಾಧ್ಯಮ ರಂಗ ಬಂದ ನಂತರ ಪತ್ರಿಕಾ ರಂಗಕ್ಕೆ ಸ್ವಲ್ಪ ಹಿನ್ನಡೆಯಾಗಿದ್ದು, ಸುಮಾರು ಶತಮಾನಗಳ ಇತಿಹಾಸವಿರುವ ಪತ್ರಿಕಾ ರಂಗ ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಪತ್ರಿಕೆಗೂ ತಟ್ಟಿದೆ. ಸುದ್ದಿ ಬಿತ್ತರಿಸುವ ಪತ್ರಿಕೆಗೆ ಸರ್ಕಾರದಿಂದ ರಿಯಾಯಿತಿ ಸಿಗಬೇಕಿದೆ. ಪತ್ರಿಕಾ ಸಂಪಾದಕರ ಕಷ್ಟ ಸುಖಗಳನ್ನು ಸರ್ಕಾರ ಆಲಿಸಬೇಕಿದೆ.ಹಲವಾರು ವರ್ಷಗಳಿಂದ ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ ಅನೇಕ ಸಂಪಾದಕರು ಪತ್ರಕರ್ತರು ವಿತರಕರು ಇಂದು ಸರ್ಕಾರದ ಸೂಕ್ತ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ. ಅಳಿವಿನಂಚಿನಲ್ಲಿರುವ ಕೆಲವು ಪತ್ರಿಕೆಗಳ ಬೆಳವಣಿಗೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಸೌಲಭ್ಯಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ.ಹಲವಾರು ವರ್ಷಗಳಿಂದ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳನ್ನು ಸ್ಥಳೀಯ ಪತ್ರಿಕಾ ವಿತರಕರು ಚಳಿ ಗಾಳಿ ಮಳೆ ಬಿಸಿಲು ಲೆಕ್ಕಿಸದೆ ಓದುಗರ ಮನೆಗಳಿಗೆ, ಇಲಾಖೆಗಳಿಗೆ ತಲುಪಿಸುವ ಕೆಲಸವನ್ನು ಪತ್ರಿಕೆ ಹಂಚುವ ವಿತರಕರು ಮಾಡುತ್ತಿದ್ದು, ಪತ್ರಿಕಾ ವಿತರಕರಿಗೆ ಸರ್ಕಾರ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ನೀಡುವ ಮೂಲಕ ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಕರ ಮಕ್ಕಳಿಗೆ ಉಚಿತ ಬಸ್ ಪಾಸ್, ಉಚಿತ ಆರೋಗ್ಯ, ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯಗಳನ್ನು ನೀಡುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದೇವೆ ಎಂದರು.