
ಸಂಜೆವಾಣಿ ವಾರ್ತೆ
ಕೊಟ್ಟೂರು, ಏ.02: ನಾವೆಲ್ಲ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ವಿರೋಧ ಮಾಡುತ್ತಿಲ್ಲ, ವ್ಯಕ್ತಿ ವಿರುದ್ಧ ವಿರೋಧ ಮಾಡುತ್ತಿರುವುದು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ದೊಡ್ಡರಾಮಣ್ಣ ತಿಳಿಸಿದರು.
ತಾಲ್ಲೂಕಿನ ಮಲ್ಲನಾಯ್ಕನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿರುವ ನನ್ನಂತಹವರನ್ನು ಹಾಗೂ ಕಾರ್ಯಕರ್ತರನ್ನು ಶಾಸಕ ಭೀಮನಾಯ್ಕ ಕಡೆಗಣಿಸುತ್ತಿರುವುದು ಪಕ್ಷದ ವರ್ಚಸ್ಸಿಗೆ ದಕ್ಕೆಯಾಗುತ್ತದೆ ಎಂದರು. ಶೀಘ್ರದಲ್ಲಿ ಇನ್ನೊಮ್ಮೆ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರಪ್ರಸಾದ್ ಮಾತನಾಡಿ ಭೀಮಾನಾಯ್ಕ ಕ್ಷೇತ್ರದಲ್ಲಿ ಕೊಟ್ಟೂರು ಭಾಗವನ್ನು ನಿರ್ಲಕ್ಷಿಸುತ್ತಿರುವುದು ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ, ನಮ್ಮಲ್ಲಿನ ವೈಮನಸ್ಸು ಚುನಾವಣೆ ಸಮಯದಲ್ಲಿ ವಿರೋಧಿಗಳಿಗೆ ಅನುವು ಮಾಡಿಕೊಡುವುದರಿಂದ ಭೀಮನಾಯ್ಕ್ ಈಗಲಾದರೂ ಎಚ್ಚೆತ್ತುಕೊಳ್ಳಬೇಕು.
ಭೀಮಾನಾಯ್ಕ ಅವರಿಗೆ ಟಿಕೆಟ್ ಘೋಷಣೆಯಾಗಿದೆ ಹಾಗಾಗಿ ಪಕ್ಷದ ಹಿತ ದೃಷ್ಠಿಯಿಂದ ಭೀಮಾನಾಯ್ಕ ಕೂಡಲೇ ಕೊಟ್ಟೂರಿನಲ್ಲಿ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ತೆರೆದು ಎಲ್ಲರ ವಿಶ್ವಾಸದೊಂದಿಗೆ ಚುನಾವಣೆ ಎದುರಿಸಲು ಮುಂದಾಗಲಿ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಮುಖಂಡರಾದ ಎಂ.ಯು.ಪರಮೇಶ್ವರಯ್ಯ, ಹರಾಳು ಕೊಟ್ರಗೌಡ, ಕರಡಿ ಕೊಟ್ರಯ್ಯ, ಅಂಬಳಿ ಕೊಟ್ರಪ್ಪ, ತಿಮ್ಮಲಾಪುರ ಕೊಟ್ರೇಶ್, ಅಂಬಳಿ ಕೊಟ್ರಪ್ಪ, ,ಕನ್ನಾಕಟ್ಟೆ ಪ್ರದೀಪ್, ಚಂದ್ರನಾಯ್ಕ, ಪಿ.ಎಚ್.ರಾಘವೇಂದ್ರ, ಇಂದ್ರಜಿತ್, ನಾಗಪ್ಪ ಇದ್ದರು.