
ಸಂಜೆವಾಣಿ ವಾರ್ತೆ
ದಾವಣಗೆರೆ.ನ.8: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ರೈತರ ಪಂಪ್ಸೆಟ್ಗಳಿಗೆ ಟ್ರಾನ್ಸ್ ಫಾರ್ಮರ್ ಸಹಿತ ಮೂಲ ಸೌಲಭ್ಯ ಒದಗಿಸುವ ಯೋಜನೆ ರದ್ದು ಮಾಡಿದ್ದು, ಬದಲಾಗಿ ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸ್ಪಷ್ಟವಾಗಿ ಆದೇಶಿಸಿರುವುದನ್ನು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಖಂಡಿಸುತ್ತದೆ ಎಂದು ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜ್ ಲೋಕಿಕೆರೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬರದಿಂದ ಕಂಗಾಲಾಗಿರೋ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ಡಿ.ಎಂ. ವಿನೋದ್ ಕುಮಾರ್ ಕಳೆದ ಅ. ೭ ರಂದು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ . ಸೆ .೨೨ ರ ನಂತರ ನೋಂದಣಿ ಆಗುವ ನೀರಾವರಿ ಪಂಪ್ಸೆಟ್ಗಳಿಗೆ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.ಸರ್ಕಾರದ ಹೊಸ ಆದೇಶದ ಹಿನ್ನಲೆ ರೈತರು ತಮ್ಮ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪಡೆಯಲು ಲಕ್ಷಾಂತರ ರೂ . ಹಣ ಖರ್ಚು ಮಾಡಬೇಕಿದೆ ಎಂದರು.ಕಳೆದ ಹತ್ತು ವರ್ಷದಿಂದ ಅಕ್ರಮ – ಸಕ್ರಮ ಜಾರಿಯಲ್ಲಿತ್ತು . ಪಂಪ್ ಸೆಟ್ ಮೂಲಕ ನೀರಾವರಿ ಮಾಡುವ ರೈತರಿಗೆ ಇಂಧನ ಇಲಾಖೆಯ ಈ ಯೋಜನೆ ವರವಾಗಿತ್ತು . ರೈತರು ಸುಮಾರು ೨೦ ಸಾವಿರ ರೂ . ಶುಲ್ಕ ಪಾವತಿಸಿ ನೀರಾವರಿ ಪಂಪ್ಸೆಟ್ ವಿದ್ಯುತ್ ಸಂಪರ್ಕ ಪರವಾನಗಿ ಪಡೆದರೆ , ವಿದ್ಯುತ್ ಕಂಪನಿಗಳೇ ಆ ರೈತನ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು .ಆದರೆ ಸರ್ಕಾರದ ಹೊಸ ನೀತಿಯಿಂದ ವಿದ್ಯುತ್ ಜಾಲ ಎಷ್ಟೇ ದೂರವಿದ್ದರೂ ಸ್ವಂತ ಹಣದಲ್ಲೇ ವಿದ್ಯುತ್ ಕಂಬ ಮತ್ತು ತಂತಿ ಹಾಕಿಕೊಳ್ಳಬೇಕಿದೆ . ಜೊತೆಗೆ ಲಕ್ಷಾಂತರ ರೂ . ಖರ್ಚು ಮಾಡಿ ಟ್ರಾನ್ಸ್ಫಾರ್ಮರ್ ಪಡೆಯಬೇಕಿದೆ . ಇದು ರೈತರಿಗೆ ಭಾರಿ ಸಂಕಷ್ಟ ತಂದೊಡ್ಡಿದೆ . ರೈತರಿಗೆ ನೋಂದಣಿ ಶುಲ್ಕ ಪಾವತಿಸುವುದೇ ಕಷ್ಟವಾಗಿತ್ತು . ಸರ್ಕಾರದ ಹೊಸ ನೀತಿಯಿಂದ ರೈತರು ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಾಂತರ ರೂ . ಖರ್ಚು ಮಾಡಬೇಕಿದೆ.ಮಳೆಯ ಅಭಾವದಿಂದ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದು , ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ . ಪ್ರಸ್ತುತ ಹಿಂಗಾರಿನಲ್ಲಿ ಕೂಡ ಮಳೆಯ ಅಭಾವದಿಂದಾಗಿ ರೈತನ ಬೆಳೆಗಳು ಸಂಪೂರ್ಣ ನಾಶವಾಗಿವೆ . ಸರ್ಕಾರದ ವರದಿಯ ಪ್ರಕಾರ ರಾಜ್ಯದಲ್ಲಿ ೨೨೩ ತಾಲ್ಲೂಕುಗಳು ಸಂಪೂರ್ಣ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು ೨೦೦ ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು , ಇದು ದುರ್ದೈವದ ಸಂಗತಿಯಾಗಿದೆ ಎಂದರು.