(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.08: ನಗರದ ಬಾಲಭಾರತಿ ಶಾಲೆಯಲ್ಲಿ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ನಿಂದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ 79ನೇ ಪುಣ್ಯಸ್ಮರಣೋತ್ಸವವನ್ನು ಇಂದು ಬೆಳಿಗ್ಗೆ ಆಚರಿಸಲಾಯ್ತು
ಗವಾಯಿಗಳ ಭಾವಚಿತ್ರಕ್ಕೆ ಕರಾಟೆ ಶಾಲೆಯ ಮಕ್ಕಳು ಪೂಜೆ ಸಲ್ಲಿಸಿ ನಮಿಸಿದರು.
ಟ್ರಸ್ಟ್ನ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿ, ಪಂಚಾಕ್ಷರಿ ಗವಾಯಿಗಳು ಯುಗಪುರುಷ ಹಾನಗಲ್ಲು ಕುಮಾರಸ್ವಾಮಿಗಳ ಕೃಪಾರ್ಶಿವಾದದಿಂದ ಸಂಗೀತದಲ್ಲಿ ಸಾಧನೆ ಮಾಡಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಮೂಲಕ ಸಂಗೀತದಿಂದ ಸಾವಿರಾರು ಅಂದ ಅನಾಥ ಬಾಳಿಗೆ ಬೆಳಕಾದರು. ಪುಟ್ಟರಾಜ ಕವಿಗವಾಯಿಗಳ ಅಂತಹ ಶ್ರೇಷ್ಠ ಶಿಷ್ಯರನ್ನು ನಾಡಿಗೆ ನೀಡಿದರು.
ಇಂದು ಪೂಜ್ಯರ ಪರೋಪಕರ ಗುಣದಿಂದ ಸಾವಿರಾರು ಜನ ಅಂದ ಕಲಾವಿದರು ಸಂಗೀತದ ಮೂಲಕ ಬದುಕನ್ನು ರೂಪಿಸಿಕೊಂಡಿದ್ದಾರೆ. ಪೂಜ್ಯರ ಬದುಕೇ ಇಂದು ಸಮಾಜಕ್ಕೆ ಆದರ್ಶವಾಗಿದೆ ಎಂದು ಹೇಳಿದರು.
ಪೂಜ್ಯರ ಪುಣ್ಯಸ್ಮರಣೆಯ ನಿಮಿತ್ತ ನಗರದ ಸಾಮರ್ಥನಂ ಅಂಗವಿಕಲರ ಸಂಸ್ಥೆಯ ಅಂಧ, ಅಂಗವಿಕಲರ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು.