ನ್ಯೂಮೋನಿಯಾದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ಪಡೆಯಿರಿ

ಕಲಬುರಗಿ: ನ.20:ವಿಪರಿತ ಜ್ವರ, ಚಳಿಯಾಗುವುದು, ಉಸಿರುಗಟ್ಟುವುದು, ಕೆಮ್ಮು, ಕಫದಲ್ಲಿ ರಕ್ತ, ಮೈ-ಕೈ ನೋವು, ಸುಸ್ತು, ವಾಕರಿಕೆ, ಸಂಧಿವಾತ, ಸ್ನಾಯು ಎಳೆತದಂತಹ ಲಕ್ಷಣಗಳು ನ್ಯೂಮೋನಿಯಾಕ್ಕೆ ಸಂಬಂಧಿಸಿದ್ದರಿಂದ ಇದರ ಬಗ್ಗೆ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯಯುತವಾಗಬೇಕು ಎಂದು ನಿವಾರಿಸಿಕೊಳ್ಳಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಜರುಗಿದ ‘ನ್ಯುಮೋನಿಯಾ ತಡೆಗಟ್ಟುವ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನ್ಯೂಮೋನಿಯಾ ಜ್ವರ ಶ್ವಾಸಕೋಶಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ಕಾಯಿಲೆಯಾಗಿರುತ್ತದೆ. ಇದು ಎಲ್ಲಾ ವಯೋಮಾನದವರಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಮತ್ತು ವಯೋವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವುದುರಿಂದ ಹೆಚ್ಚು ಬಾಧಿಸುತ್ತದೆ. ಆಗ ಶ್ವಾಸಕೋಶದಲ್ಲಿ ಬ್ಯಾಕ್ಟರೀಯಾ, ವೈರಸ್, ಶೀಲಿಂಧ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೊಂಕು ತಗುಲಿ ನ್ಯೂಮೋನಿಯಾ ಉಂಟಾಗುತ್ತದೆ ಎಂದರು.
ನ್ಯೂಮೋನಿಯಾ ಖಾಯಿಲೆಯು ರೋಗಗ್ರಸ್ಥ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಆತನು ಬಳಸಿದ ಬಟ್ಟೆ,ತಟ್ಟೆ, ಬಟ್ಟಲು, ಲೋಟ, ಚಮಚ, ಕರವಸ್ತ್ರ, ಟವೆಲ್, ಉಡುಪುಗಳನ್ನು ಬಳಸಿದಾಗ ಇತರರಿಗೆ ಹರಡುತ್ತದೆ. ನ್ಯೂಮೋನಿಯಾಕ್ಕೆ ಚಿಕಿತ್ಸೆಯ ಮೂಲಕ ನಿವಾರಿಸಿಕೊಳ್ಳಬಹುದಾಗಿದೆ. ಸ್ವಚ್ಛವಾಗಿ ಕೈತೊಳೆಯುವುದು, ರೋಗಿಗಳಿಂದ ದೂರವಿರುವುದು, ಆರಂಭಿಕ ಹಂತದಲ್ಲಿಯೇ ಖಾಯಿಲೆಯನ್ನು ಗುರ್ತಿಸಿ ಚಿಕಿತ್ಸೆ ಪಡೆಯುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರ್ತನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಗಂಗಮ್ಮ, ರೇಶ್ಮಾ ನಕ್ಕುಂದಿ, ಅರ್ಚನಾ ಸಿಂಗೆ, ಅನಿತಾ ಕಣಸೂರ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರು ಇದ್ದರು.