
ಕಲಬುರಗಿ,ಆ.7: ನೇಕಾರರು ನೂರಾರು ವರ್ಷಗಳಿಂದ ಬಟ್ಟೆ ನೇಯ್ಗೆ ವೃತ್ತಿಯನ್ನೇ ಅವಲಂಬಿಸಿ, ಅನೇಕ ಸಮಸ್ಯೆಗಳಿದ್ದರೂ ಇಂದಿಗೂ ಕೂಡಾ ತಮ್ಮ ವೃತ್ತಿಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಸಮಾಜಕ್ಕೆ ಬಟ್ಟೆಯನ್ನು ನೀಡಿ ಮಾನವನ್ನು ಕಾಪಾಡುವ ನೇಕಾರರ ಬದುಕು ಸಂಕಷ್ಟದಲ್ಲಿದೆ. ವೃತ್ತಿಗೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳು, ಆರ್ಥಿಕ ಸಹಾಯ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಟ್ಟು, ನೇಕಾರರ ಬದುಕು ಹಸನುಗೊಳಿಸುವ ಕಾರ್ಯವಾಗಬೇಕಾಗಿದೆ ಎಂದು ಹಿರಿಯ ಕೈಮಗ್ಗ ನೇಕಾರ ರವೀಂದ್ರ ಜೋಳದ ಒತ್ತಾಸೆ ಮಾಡಿದರು.
ಆಳಂದ ತಾಲೂಕಿನ ಸುಂಟನೂರ ಗ್ರಾಮದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ‘ಒಂಬತ್ತನೇ ರಾಷ್ಟ್ರೀಯ ಕೈಮಗ್ಗ ನೇಕಾರರ ದಿನಾಚರಣೆ’ಯಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನೇಕಾರರಿಗೆ ಶ್ರಮಕ್ಕೆ ತಕ್ಕಂತೆ ಕೂಲಿ ದೊರೆಯುತ್ತಿಲ್ಲ. ಉತ್ತಮ ಗುಣಮಟ್ಟದ ಸಲಕರಣಗಳ ಪೂರೈಕೆಯಾಗಬೇಕು. ಸರ್ಕಾರದ ಯೋಜನೆಗಳು ಸೂಕ್ತ ವ್ಯಕ್ತಿಗೆ ತಲುಪಬೇಕು. ವಸತಿ, ವಿಮಾ ಸೌಲಭ್ಯ, ನೇಕಾರ ಮರಣ ಹೊಂದಿದ ನಂತರ ಆತನ ಅವಲಂಬಿತರಿಗೆ ಪಿಂಚಣಿ ನೀಡಬೇಕು. ಸರಳವಾಗಿ ಸಾಲ ಸೌಲಭ್ಯ ದೊರೆಯಬೇಕಾಗಿದೆ. ನೇಕಾರರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು. ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಲೆ ದೊರೆಯಬೇಕು. ನಮ್ಮ ಗ್ರಾಮದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಶಾಖೆ ಆರಂಭಿಸಬೇಕು. ನೇಕಾರಿಕೆಯ ವೃತ್ತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾದರೆ ಜೀವನ ಸಾಗಿಸುವುದು ಕಷ್ಟವಾಗಿದ್ದು, ಅನಿವಾರ್ಯವಾಗಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಿರಿಯ ಕೈಮಗ್ಗ ನೇಕಾರರಿಗೆ ಗೌರವಿಸಿ ಮಾತನಾಡಿದ ಸೇವಾ ಬಳಗದ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ, ಆಧುನಿಕತೆ ಹಾಗೂ ಕೈಗಾರಿಕಾ ಕ್ರಾಂತಿಯಿಂದಾಗಿ ನಮ್ಮ ದೇಶದ ಮೂಲ ವೃತ್ತಿ, ಕಸುಬುಗಳು, ಗೃಹ ಕೈಗಾರಿಕೆಗಳು ಪ್ರಸ್ತುವಾಗಿ ಅವನತಿಯ ಅಂಚಿನಲ್ಲಿವೆ. ಇದರಿಂದ ವೃತ್ತಿ ಅವಲಿಂಬಿತ ಅನೇಕ ಜನರು ಸಂಕಷ್ಟದಲ್ಲಿದ್ದಾರೆ. ಗುಡಿ, ಗೃಹ ಕೈಗಾರಿಕೆಗಳು ಉಳಿದರೆ ಮಾತ್ರ ಮೂಲ ವೃತ್ತಿ ಉಳಿದು, ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ವೃದ್ಧಿಯಾಗಲಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಮತ್ತು ಸಂಸ್ಕøತಿಯ ಉಳಿಯುವಿಕಯಲ್ಲಿ ನೇಕಾರರ ಪಾತ್ರ ಅನನ್ಯವಾಗಿದೆ. ನೇಕಾರರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರದ ಯೋಜನಗೆಳನ್ನು ಸದುಪಯೋಗಮಾಡಿಕೊಳ್ಳಬೇಕು. ನೇಕಾರರ ಅಭಿವೃದ್ಧಿಗೆ ಪೂರಕವಾದ ನೀತಿಗಳ ಪರಿಣಾಮಕಾರಿ ಅನುಷ್ಠಾನವಾಗಬೇಕು ಎಂದರು.
ಹಿರಿಯ ಕೈಮಗ್ಗ ವೃತ್ತಿ ನೇಕಾರರಾದ ರವೀಂದ್ರ ಜೋಳದ, ಕಲಾವತಿ ಜಿ.ಹುಲಿಮನಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ, ಜಿಲ್ಲಾ ದೇವಾಂಗ ಸಮಾಜದ ಉಪಾಧ್ಯಕ್ಷ ನಾಗರಾಜ ಶೀಲವಂತ, ನೇಕಾರ ಸಮಾಜದ ವೀರಣ್ಣ ಹೊನಗುಂಟಿ, ಶಂಕರ ಗಸ್ನಿ, ಮಹಾದೇವ ಹುಲಿಮನಿ, ಮಲ್ಲಿಕಾರ್ಜುನ ಮಾಳಾ, ವಿನಾಯಕ ದಸೂರಾ, ಗೋವಿಂದ ಗುಂಡದ್, ಶಂಕರ ಜಿ.ಹುಲಿಮನಿ, ಸಕ್ಕುಬಾಯಿ ಜಿ.ಹಾವಗುಂಡೆ, ಅನ್ನಪೂರ್ಣ ಎಚ್.ಹುಲಿಮನಿ, ಸಂಗೀತಾ ಗಸ್ನಿ, ಕಮಲಾಬಾಯಿ ವಿ.ಹೊನಗುಂಟಿ, ಹಣಮಂತ ಪೂಜಾರಿ, ನಾರಾಯಣ ಮಾಳಾ, ಈರಣ್ಣ ಹರಸುರ್, ಸರುಬಾಯಿ ಮಾಳಾ ಸೇರಿದಂತೆ ಮತ್ತಿತರರಿದ್ದರು.