ಬೀದರ್: ಮಾನಷ್ಯ ಇಂದಿನ ಆಧುನಿಕ ಯುಗದಲ್ಲಿ ನೆಮ್ಮದಿ ಕಳೆದುಕೊಂಡಿದ್ದಾನೆ. ನಿತ್ಯ ದೇವರ ಧ್ಯಾನ, ಜಪ, ತಪ ಮಾಡಿ ನೆಮ್ಮದಿ ಕಂಡು ಕೊಳ್ಳಿ ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು. ಮಂಗಳವಾರ ಔರಾದ ತಾಲ್ಲೂಕಿನ ಜಕನಾಳ ಗ್ರಾಮದ ಹನುಮಾನ ಮಂದಿರ ಹಾಗೂ ಪಾಂಡುರಂಗ ಮಂದಿರ ಕಳಸಾರೋಣ ಕಾರ್ಯಕ್ರಮದ ನಿಮಿತ್ಯ ನಡೆದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ. ಮಹಾತ್ಮರ ದರ್ಶನದಿಂದ ಜೀವನ ಪಾವನ ಆಗುತ್ತದೆ. ಪ್ರತಿಯೊಬ್ಬರೂ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಬಸವಾದಿ ಶರಣರು, ದಾರ್ಶನಿಕರು, ಪಾಂಡುರಂಗ ಸೇರಿದಂತೆ ಅನೇಕ ಮಹಾತ್ಮರ ಜೀನವ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಇಂದಿನ ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಪೋಷಕರು ಮಕ್ಕಳನ್ನೂ ಪೊಷಿಸಿಕೊಳ್ಳಬೇಕು ಎಂದು ನುಡಿದರು.
ಎಲ್ಲರೂ ಕಾಯಕ ಮಾಡಿ ಬದುಕು ಸಾಗಿಸಬೇಕು , ಪರಮಾತ್ಮನನ್ನು ದಿನಾಲು ಬೆಳಗಿನ ಜಾವ ಪೂಜಿಸಬೇಕು ಅಲ್ಲದೇ ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದು ನುಡಿದರು.
ಇದಕ್ಕೂ ಮೊದಲು ಗ್ರಾಮದ ಮುಖ್ಯ ರಸ್ತೆಯಿಂದ ಹನುಮಾನ ದೇವಸ್ಥಾನದವರೆಗೆ ಬಸವಲಿಂಗ ಅವಧೂತರನ್ನು ಕುದುರೆ ಮೇಲೆ ಮೆರವಣಿಗೆ ಮಾಡಲಾಯಿತ್ತು. ಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಸಾವಿರಾರು ಜನ ಭಕ್ತಿ, ಶ್ರದ್ಧೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖರಾದ ದೀಲಿಪ ಪಾಟೀಲ್, ಅನೀಲ ಮಹಾರಾಜ, ದೇವಿದಾಸ ಮಹಾರಾಜ ಬಾಬುರಾವ ಪಾಟೀಲ್, ದೇವಿದಾಸ ಪಾಟೀಲ್ ಇದ್ದರು.