ನೂರು ದಿನದ ಹೊಸ್ತಿಲಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ, ಆಗಸ್ಟ್ 30: ನೂತನ ಸರ್ಕಾರ ನೂರು ದಿನ ಪೂರೈಸಿದ ಹೊಸ್ತಿಲಲ್ಲಿ ನುಡಿದಂತೆ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿರುವುದು ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಎಂ. ಸಿ.ಸುಧಾಕರ್ ಅವರು ಬಣ್ಣಿಸಿದರು.

ಬುಧವಾರ ನಗರದ ಶ್ರೀ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಹರಿರುವ 2,99,909 ಗೃಹಿಣಿಯರಲ್ಲಿ 2,51,530 ಮಹಿಳೆಯರು ಈವರೆಗೆ ನೊಂದಣಿ ಆಗಿದ್ದು, ಈ ಪೈಕಿ ಜಿಲ್ಲೆಯ 1 ಲಕ್ಷ ಮಹಿಳೆಯರ ಖಾತೆಗೆ ಡಿ.ಬಿ.ಟಿ ಮುಖಾಂತರ 2000 ರೂಗಳು ಇಂದು ವರ್ಗಾವಣೆಯಾಗಿದೆ. ಬಾಕಿ ಉಳಿದಿರುವ ನೋಂದಯಿತರಿಗೆ ಹಂತ ಹಂತವಾಗಿ ಹಣ ಜಮೆಯಾಗಲಿದೆ. ಈ ಗೃಹಲಕ್ಷ್ಮಿ ಸಹಾಯಧನ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೆಚ್ಚು ಸಹಾಯವಾಗಲಿದೆ. ಕುಟುಂಬದ ನಿರ್ವಹಣೆ ಹೊತ್ತಿರುವ ಯಜಮಾನಿ ಮಹಿಳೆಗೆ ತನ್ನ ಆರ್ಥಿಕ ಅಸಮತೋಲನ ನಿವಾರಿಸಲಿದೆ ಎಂದು ತಿಳಿಸಿದರು.

ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಕೀರ್ತಿ ಸರ್ಕಾರಕ್ಕೆ ಸಂದಿದ್ದು, ನಿರುದ್ಯೋಗಿ ಪದವೀಧರರಿಗೆ 3000 ಗಳನ್ನು ಕೊಡುವ ಯುವ ನಿಧಿ ಯೋಜನೆ ಮುಂದಿನ ತಿಂಗಳುಗಳಲ್ಲಿ ಜಾರಿಯಾಗಲಿದೆ. ಪದವಿ ಮುಗಿಸಿ ಉದ್ಯೋಗ ಸಿಗದ ಉದ್ಯೋಗಾಂಕ್ಷಿಗಳಿಗೆ ಆರು ತಿಂಗಳ ನಂತರ 3000 ರೂಗಳನ್ನು ಮತ್ತು ಡಿಪ್ಲೊಮೋ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಮಾಸಿಕ 1500 ರೂಗಳನ್ನು ಕೊಡುವ ಕಾರ್ಯಕ್ರಮ ಜಾರಿಯಾಗಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾತನಾಡಿ, ಸರ್ಕಾರವು ಘೋಷಿಸಿರುವ 5 ಪ್ರಮುಖ ಮಹತ್ವಕಾಂಕ್ಷಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದೆ. ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಆ ಸಾಲಿಗೆ ಗೃಹಲಕ್ಷ್ಮೀ ಇಂದು ಸೇರ್ಪಡೆಯಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬದ ಯಜಮಾನಿ ಪಾತ್ರವೂ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣೆಯು ಸುಲಭವಾಗಲಿದೆ ಎಂದು ಈ ಯೋಜನೆಯನ್ನು ಸರ್ಕಾರ ಇಂದು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ಈ ವರೆಗೆ ಅರ್ಹರಿರುವ ಶೇ. 83.98 ರಷ್ಟು ಮಹಿಳೆಯರನ್ನು ನೋಂದಣಿ ಮಾಡಿಸಲಾಗಿದೆ ಎಂದು ತಿಳಿಸಿದರು.

ಶಾಸಕರಾದ ಪ್ರದೀಪ್ ಈಶ್ವರ್ ಅವರು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ದಿನ ಒಂದು ದಿನದ ಊಟಕ್ಕೂ ಹೋರಾಟ ನಡೆಸುವಂತಹ ವರ್ಗದ ಜನರಿಗೆ ದೇವರಂತೆ ಕಾಣಿಸುತ್ತವೆ ಇಂತಹ ಯೋಜನೆಗಳ ಫಲಾನುಭವವನ್ನು ಅರ್ಹರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸಾಂಸ್ಕೃತಿಕ ನಗರಿ ಮೈಸೂರಿನಿಂದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ ರಾಜ್ಯ ಮಟ್ಟದ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರದರ್ಶಿಸಲಾಯಿತು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾದ ಅರುಣ, ಎಂ.ಎಸ್ ಲಲಿತಮ್ಮ, ಜಮೀಲಾ ಬೇಗಂ, ಶುಭ ಜಿ.ವಿ, ಗಾಯತ್ರಿ, ಸಾವಿತ್ರಿ ಅವರಿಗೆ ಮಂಜೂರಾತಿ ಆದೇಶ ಪತ್ರವನ್ನು ವಿತರಣೆ ಮಾಡಲಾಯಿತು.

ಪ್ರತಿಕ್ರಿಯೆಗಳು:

ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮುನಿರತ್ನಮ್ಮ ಅವರು ಮಾತನಾಡಿ, ಜೀವನದಲ್ಲಿ ಎದುರಾಗುವ ಹಣಕಾಸಿನ ತುರ್ತು ಸಮಸ್ಯೆಗಳಾದ ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸ ವೆಚ್ಚಕ್ಕೆ ಗೃಹಲಕ್ಷ್ಮೀಯ 2000 ರೂಗಳ ಧನಸಹಾಯ ಬಹಳ ಸಹಕಾರಿಯಾಗಲಿದೆ ಎಂದರು. ಮತ್ತೊಬ್ಬ ಫಲಾನುಭವಿ ಮಹಿಳೆ ಭರಣಿ ಅವರು ಮಾತನಾಡಿ, ಮನೆ ಬಾಡಿಗೆ, ಅನಿಲ ವೆಚ್ಚ, ತರಕಾರಿ ಮತ್ತು ಆಹಾರ ಉತ್ಪನ್ನಗಳು ಈ ರೀತಿಯ ಮೂಲಭೂತ ಅಗತ್ಯಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಹಾಯವಾಗಲಿದ್ದು, ಅದರಲ್ಲಿಯೂ ವಯೋವೃದ್ಧ ಯಜಮಾನಿ ಮಹಿಳೆಯರಿಗೆ ವರದಾನವಾಗಲಿದೆ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ|| ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ.ಸಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್, ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ನಾಗೇಶ್, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ವೆಂಕಟೇಶ್, ನಗರಸಭೆ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಹಾಜರಿದ್ದರು.