ನೀರು ಒಸರುತ್ತಿದ್ದ ಗುಂಡಿಯಲ್ಲಿಯೇ ಅಂತಿಮ ಸಂಸ್ಕಾರ!

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.09:- ಜಿಲ್ಲಾ ಕೇಂದ್ರಕ್ಕೆ ತೀರಾ ಸಮೀಪ ಇರುವ ಹರದನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೇ ಗುಂಡಿ ತೆಗೆದರೇ ಒಸರುತ್ತಿದ್ದ ನೀರಿನ ನಡುವೆಯೇ ಅಂತ್ಯಕ್ರಿಯೆ ನಡೆಸಿರುವ ಘಟನೆ ಇಂದು ನಡೆದಿದೆ.
ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸರ್ಕಾರಿಜಾಗವಿದ್ದರೂ ಅಧಿಕಾರಿಗಳು ಸ್ಮಶಾನ ಸ್ಥಳ ಗುರುತು ಮಾಡದ ಹಿನ್ನೆಲೆಯಲ್ಲಿ ಸ್ವಂತಜಮೀನುಇಲ್ಲದವರುಯಾರಾದರೂ ಮೃತಪಟ್ಟರೇ ಪಡಿಪಾಟಲು ಪಡಬೇಕಾದ ದುಃಸ್ಥಿತಿ ಇದೆ.
ಗ್ರಾಮದಲ್ಲಿ ಸಿದ್ದಶೆಟ್ಟಿ (76) ಎಂಬವರು ಸೋಮವಾರ ವಯೋಸಹಜವಾಗಿ ನಿಧನರಾಗಿದ್ದರು. ಮೃತರಿಗೆ ಸ್ವಂತಜಮೀನು ಇಲ್ಲದ ಕಾರಣ ಅಂತಿಮ ಸಂಸ್ಕಾರಕ್ಕೆ ಜಾಗವಿಲ್ಲದೇ ಗ್ರಾಮಸ್ಥರು ಪರದಾಡಿದ್ದಾರೆ. ಸರ್ಕಾರಿ ಭೂಮಿಯೊಂದರ ಕೆಸರು ತುಂಬಿದ ಜಾಗದಲ್ಲೇ ಸಮಾಧಿತೆಗೆದು ಅಂತ್ಯ ಸಂಸ್ಕಾರ ಮಾಡಲಾಗಿದೆ. ಸಮಾಧಿ ಗುಂಡಿ ತೆಗೆಯುವಾಗ ಹೊರ ಬರುತ್ತಿದ್ದ ನೀರನ್ನು ಹೊರಹಾಕಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಈ ಕುರಿತು, ಗ್ರಾಮದಗಿರೀಶ್ ಎಂಬವರು ಮಾತನಾಡಿ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಸರ್ಕಾರಿಜಾಗವಿದ್ದರೂ ಅಧಿಕಾರಿಗಳು ಸ್ಮಶಾನ ಗುರುತು ಮಾಡಿಲ್ಲ, ಇನ್ನಾದರೂ ಸರ್ಕಾರಿ ಜಾಗವನ್ನು ಸ್ಮಶಾನ ಮಾಡುವಂತೆ ಆಗ್ರಹಿಸಿದ್ದಾರೆ.