ನಿಶಾಳಿಂದ ಎರಡು ಕೋಟಿಗೂ ಅಧಿಕ ವಂಚನೆ

ಬೆಂಗಳೂರು,ಜು.೨೫- ಕನ್ನಡ ಚಿತ್ರರಂಗದ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಬಳಸಿ ಆರೋಪಿ ನಿಶಾ ನರಸಪ್ಪ ಸುಮಾರು ೨ ಕೋಟಿ ರೂಗಳಿಗೂ ಅಧಿಕ ವಹಿವಾಟು ನಡೆಸಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.ಆದಾಗ್ಯೂ ಆರೋಪಿಯ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಕೇವಲ ೮ ಸಾವಿರ ರೂ. ಕಂಡುಬಂದಿದ್ದು ಅಚ್ಚರಿ ಮೂಡಿಸಿದೆ.ಐಷಾರಾಮಿ ಜೀವನದ ಶೋಕಿಗೆ ಬಿದ್ದಿದ್ದ ನಿಶಾ ನರಸಪ್ಪ ಮಕ್ಕಳಿಗೆ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಪೋಷಕರಿಂದ ಹಣ ಪಡೆಯುತ್ತಿದ್ದರು. ಅದೇ ಹಣದಲ್ಲಿ ಬಾರ್, ಪಬ್, ಹೋಟೆಲ್‌ಗಳಲ್ಲಿ ಪಾರ್ಟಿ ಮಾಡುತ್ತಿದ್ದರು.ಅಲ್ಲದೇ ಶೇ.೨೦ರಷ್ಟು ಬಡ್ಡಿ ನೀಡುವುದಾಗಿ ಹಣ ಪಡೆದು ಸಾಕಷ್ಟು ಜನರಿಗೆ ವಂಚಿಸಿದ್ದ ಆರೋಪಗಳಿದ್ದು, ಆದರೆ ಈ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.ಇತ್ತೀಚೆಗೆ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಹಲವು ಆರೋಪಗಳು ಕೇಳಿ ಬಂದಿವೆ. ಈವರೆಗೆ ಸುಮಾರು ೬೦ ದೂರುಗಳು ದಾಖಲಾಗಿವೆ. ವಂಚನೆಗೊಳಗಾದ ಪೋಷಕರ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಸುಮಾರು ೪೦ ಲಕ್ಷ ರೂ. ವಂಚಿರುವುದು ತನಿಖೆಯಲ್ಲಿ ಬಯಲಾಗಿದೆ.ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ವಿಚಾರಣೆಯ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು. ಬಹುಕಾಲದಿಂದ ಸ್ಯಾಂಡಲ್?ವುಡ್?ನಲ್ಲಿ ನಟ, ನಿರೂಪಕನಾಗಿ ಗುರುತಿಸಿಕೊಂಡಿರುವ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿ ಪುತ್ರಿ ವಂಶಿಕಾ ಕಿರುತೆರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಂಶಿಕಾ ಹೆಸರು ಬಳಸಿಕೊಂಡು ಬಹಳ ಮಂದಿಗೆ ಮೋಸ ಮಾಡಲಾಗಿದೆ.
ಮಕ್ಕಳ ಟ್ಯಾಲೆಂಟ್ ಶೋ, ಆ?ಯಡ್ ಶೂಟ್ ಹೀಗೆ ಶೋಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ನಿಶಾ ನರಸಪ್ಪ ನೂರಾರು ಪೋಷಕರಿಗೆ ವಂಚನೆ ಮಾಡಿರುವ ಗಂಭೀರ ಆರೋಪಗಳಿವೆ. ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ನಿಶಾ ನರಸಪ್ಪ ವಂಚಿಸಿದ್ದಾರೆಂದು ವಂಶಿಕಾ ತಾಯಿ ಯಶಸ್ವಿನಿ ಆರೋಪಿಸಿದ್ದಾರೆ. ಇದೇ ಜುಲೈ ಎರಡನೇ ವಾರದಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.