
ಮುನವಳ್ಳಿ,ಏ5 : ಸಮೀಪದ ತೆಗ್ಗಿಹಾಳ ಗ್ರಾಮದ ಯೋಧ ಸೋಮಲಿಂಗಪ್ಪ ತುಳಜಣ್ಣವರ ಭಾರತೀಯ ಸೇನೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಶ್ರೀ ಸೋಮಶೇಖರ ಮಠದ ಶ್ರೀ ಮುರಘೇಂದ್ರ ಶ್ರೀಗಳು, ನಿತ್ಯಾನಂದ ಆಶ್ರಮದ ಶ್ರೀ ಮುಕ್ತಾನಂದ ಶ್ರೀಗಳ ಸಾನಿಧ್ಯದಲ್ಲಿ ತೆಗ್ಗಿಹಾಳ ಗ್ರಾಮದ ಗ್ರಾಮಸ್ಥರು ಯೋಧನನ್ನು ಮುನವಳ್ಳಿ ಅಲೂರಮಠದ ಆವರಣದಲ್ಲಿ ಸನ್ಮಾನಿಸಿ ಬರಮಾಡಿಕೊಂಡರು.
ಸಮಾರಂಭದಲ್ಲಿ ಮುರುಘೇಂದ್ರ ಶ್ರೀಗಳು ಮಾತನಾಡಿ ರಾಷ್ಟ್ರ ನಿರ್ಮಾಣದಲ್ಲಿ ಯೋಧರ ಪಾತ್ರ ಮಹತ್ವದ್ದು ದೇಶ ಕಾಯುವ ಪ್ರತಿ ಯೋದರಿಗೆ ಗೌರವ ಸನ್ಮಾನ ಮಾಡುವದು ನಮ್ಮ ಕರ್ತವ್ಯ ಎಂದರು.
ಮುಕ್ತಾನಂದ ಶ್ರೀಗಳು ಮಾತನಾಡಿ ಭಾರತ ಮಾತೆಯ ರಕ್ಷಣೆಯಲ್ಲಿ ತೊಡಗಿರುವ ಯೋಧರು ತ್ಯಾಗದ ಪ್ರತೀಕ ಪ್ರಾಣದ ಹಂಗು ತೊರೆದು ನಮ್ಮನ್ನು ಹಗಲಿರುಳು ರಕ್ಷಣೆ ಮಾಡುವ ಸೈನಿಕರು ನಿಜವಾದ ಗೌರವಕ್ಕೆ ಪಾತ್ರರಾದವರು ಎಂದರು. ಡಾ. ಬಸೀರ ಹಮ್ಮದ ಬೈರಕದಾರ ಮಾತನಾಡಿ ದೇಶದ ಗಡಿ ಕಾಯುವ ಸೈನಿಕರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ, ನಾವು ಯೋಧರಿಗೆ ಸದಾ ಗೌರವಿಸಬೇಕೆಂದರು.
ರಾಮಣ್ಣ ಬಡ್ಲಿ, ಅರ್ಜುನ ತುಪ್ಪಳಿ, ಡಿ.ಡಿ.ಟೋಪೋಜಿ, ರಮೇಶ ಹದ್ದನ್ನವರ, ಹಫೀಜ್ ಬೈರಕದಾರ, ಪ್ರಕಾಶ ಕರಿಗಾರ, ಯಲ್ಲಪ್ಪ ವಟ್ನಾಳ, ಅಶೋಕ ಕಂಕಣವಾಡಿ ರವಿ ವಗ್ಗರ ಇತರರು ಉಪಸ್ಥಿತರಿದ್ದರು.