ನಿವೃತ್ತ ಬ್ಯಾಂಕ್ ಅಧಿಕಾರಿಗಳ ಪ್ರತಿಭಟನೆ

ಬೆಂಗಳೂರು, ಮೇ.೨೫- ಪಿಂಚಣಿ ಮೊತ್ತ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದಿಂದ ನಿವೃತ್ತ ಬ್ಯಾಂಕ್ ಅಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಹೋರಾಟಗಾರರು, ಬ್ಯಾಂಕ್ ಉದ್ಯೋಗಿಗಳ ಪಿಂಚಣಿ ನಿಯಮಗಳು ೧೯೯೫ ಹಾಗೂ ೩೫ ರ ನಿಬಂಧನೆಯಂತೆ ಪಿಂಚಣಿ ಮೊತ್ತವನ್ನು ಪರಿಷ್ಕರಣೆ ಮಾಡದೇ ಪಿಂಚಣಿದಾರರಿಗೆ ಅನ್ಯಾಯ ಮಾಡುತ್ತಿರುವ
ಕೇಂದ್ರ ಹಣಕಾಸು ಸಚಿವಾಲಯದ ಧೋರಣೆಗೆ ಖಂಡನೆ ಎಂದರು.
ಈ ಕುರಿತು ಮಾತನಾಡಿದ ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ಅಧ್ಯಕ್ಷ ಕೆ.ವಿ. ಆಚಾರ್ಯ, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆ ನೀಡಿದ್ದರು.
ಆದರೆ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಕಳೆದ ೧೯೯೩/೯೫ ರ ಅವಧಿಯಲ್ಲಿ ಬ್ಯಾಂಕ್‌ಗಳಲ್ಲಿ ಪಿಂಚಣಿ ವ್ಯವಸ್ಥೆ ಜಾರಿಯಾದ ನಂತರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ವೇತನ ಮತ್ತು ಭತ್ಯೆಗಳನ್ನು ನಿಯಮಿತವಾಗಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು.
ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ೯೦ರ ದಶಕದಲ್ಲಿ ನಿವೃತ್ತರಾದ ಮುಖ್ಯ ಜನರಲ್ ಮ್ಯಾನೇಜರ್ಗೆ ಬ್ಯಾಂಕ್‌ನಿಂದ ಇದೀಗ ನಿವೃತ್ತರಾಗಿರುವ ಅಟೆಂಡರ್‌ನ ಪಿಂಚಣಿಗಿಂತ ಕಡಿಮೆ ಪಿಂಚಣಿ ಮೊತ್ತ ದೊರೆಯುತ್ತಿದೆ. ಇದರಿಂದ ಭಾರೀ ತಾರತಮ್ಯ ಮತ್ತು ಅನ್ಯಾಯವಾಗುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಆರ್. ಗೋಪಿನಾಥ್, ಕಾರ್ಯದರ್ಶಿ ಎ.ಎನ್.ಕೃಷ್ಣಮೂರ್ತಿ, ಸಲಹೆಗಾರ ನಡಾಫ್ ಮತ್ತಿತರರು ಭಾಗವಹಿಸಿದ್ದರು.