
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೧೨; ಐತಿಹಾಸಿಕ ಚಿತ್ರದುರ್ಗ ನಗರದ ಸ್ಚಚ್ಛತೆಗೆ ನಗರಸಭೆ ಅಧಿಕಾರಿಗಳು ಆದ್ಯತೆ ನೀಡಬೇಕು. ಈಗಿನ ತ್ಯಾಜ್ಯ ವಿಲೇವಾರಿ ನಿರ್ವಹಣಾ ವ್ಯವಸ್ಥೆ ಅತ್ಯಂತ ಕಳೆಪೆಯಾಗಿದೆ. ನಗರದ ಸ್ವಚ್ಛತೆ ಬಗ್ಗೆ ಗಮನ ವಹಿಸದೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ನಿರ್ದಾಕ್ಷಣ್ಯವಾಗಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು. ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದ ಅವರು, ಮುಂಜಾನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ, ಬಳಿಕ ಕಲುಷಿತ ನೀರು ಪ್ರಕರಣದಲ್ಲಿ ಸಾರ್ವಜನಿಕರು ಅಸ್ವಸ್ಥಗೊಂಡ ಕವಾಡಿಗರ ಹಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಚಿತ್ರದುರ್ಗ ನಗರದ ತ್ಯಾಜ್ಯ ವಿಲೇವಾರಿ ನಿರ್ವಹಣೆ, ಸ್ವಚ್ಛತೆ ದಯನೀಯ ಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿಯಲ್ಲಿ ಜನರಿಗೆ ಯಾವುದೇ ರೋಗ ರುಜಿನಗಳು ಬರಬಹುದು. ಸಾಂಕ್ರಮಿಕ ರೋಗಗಳು ಹರಡಬಹುದು. ಜನರ ಜೀವಕ್ಕೆ ಅಪಾಯವಾಗಬಹುದು. ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್, ಉಳಿದ ಆಹಾರಗಳನ್ನು ಜನರು ಚೆಲ್ಲುತ್ತಿದ್ದಾರೆ. ಖಾಲಿ ನಿವೇಶನಗಳು ತ್ಯಾಜ್ಯ ಸುರಿಯುವ ಸ್ಥಳಗಳಾಗಿ ಬದಲಾಗಿವೆ. ಇಂತಹ ಸ್ಥಳಗಳ ಪೋಟೋ ತೆಗೆದುಕೊಂಡು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳು ಮೂರು ದಿನಗಳ ನಂತರ ಮತ್ತೆ ಈ ಸ್ಥಳಗಳಿಗೆ ಭೇಟಿ ನೀಡಿ, ಪೋಟೋ ಸಹಿತ ವರದಿಯನ್ನು ಕಳುಹಿಸಿಕೊಡುವರು. ಅಧಿಕಾರಿಗಳು ಎಚ್ಚೆತ್ತು ಕೆಲಸ ನಿರ್ವಹಿಸದೇ ಹಾಗೇ ಮುಂದುವರಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ಸಾರ್ವಜನಿಕರು ಸಹ ನಗರದ ಸ್ವಚ್ಛತೆ ಬಗ್ಗೆ ಕಾಳಜಿ ಹೊಂದಿರಬೇಕು. ಅಧಿಕಾರಿಗಳು, ಆಡಳಿತ ಯಂತ್ರ ಹಾಗೂ ಸಾರ್ವಜನಿಕರು ಕೈಗೂಡಿಸಿ ಚಿತ್ರದುರ್ಗ ನಗರವನ್ನು ಸ್ವಚ್ಛತೆಯಲ್ಲಿ ಮಾದರಿಯನ್ನಾಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನಗರದ ಸ್ವಚ್ಛತೆ ವಿಷಯವನ್ನು ಲೋಕಾಯುಕ್ತದಿಂದ ಗಂಭೀರವಾಗಿ ತೆಗೆದುಕೊಂಡು ಮೇಲ್ವಿಚಾರಣೆ ನಡೆಸಲಾಗುವುದು. ಸ್ಥಳೀಯ ಅಧಿಕಾರಿಗಳು ಕಾಲಕಾಲಕ್ಕೆ ವರದಿಯನ್ನು ಸಹ ನೀಡುವರು. ಈಗಿರುವ ರೀತಿಯಲ್ಲೇ ನಗರದ ಸ್ವಚ್ಛತೆ ಮುಂದುವರೆದು, ಯಾವುದಾದರು ಸಾಂಕ್ರಮಿಕ ರೋಗ ಹರಡಿದರೆ, ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಕವಾಡಿಗರಹಟ್ಟಿಯಲ್ಲಿ ಸಂಭವಿಸಿದ ಘಟನೆ ನಗರದ ತುಂಬೆಲ್ಲಾ ಆಗಬಹುದು. ಘಟನೆಯಲ್ಲಿ ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಕಳವಳ ವ್ಯಕ್ತ ಪಡಿಸಿದರು.ನಗರದ ಹೊಳೆಲ್ಕೆರೆ ರಸ್ತೆಯಲ್ಲಿ ದೊಡ್ಡ ಚರಂಡಿಯಲ್ಲಿ ಗಿಡ ಗಂಟೆಗಳು ಬೆಳೆದು ಸರಾಗವಾಗಿ ನೀರು ಹರಿದುಹೋಗಲು ತೊಂದರೆಯಾಗುತ್ತಿರುವುದನ್ನು ಗಮನಿಸಲಾಗಿದೆ, ಇಲ್ಲಿ ಸೊಳ್ಳೆ, ನೋಣಗಳು ಹುಟ್ಟಿ ರೋಗ ಹರಡಲು ದಾರಿಯಾಗುತ್ತದೆ. ಚರಂಡಿ ಸ್ವಚ್ಛಗೊಳಿಸಲು ಯಾವುದೇ ಅನುದಾನ ಬೇಕಿಲ್ಲ. ಇದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಪ್ರತೀಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.ನಗರದಲ್ಲಿ ಖಾಲಿ ಇರುವ ನಿವೇಶನಗಳ ಮಾಲೀಕರಿಗೆ ನಗರಸಭೆ ವತಿಯಿಂದ ನೋಟಿಸ್ ನೀಡಿ, ಖಾಲಿ ನಿವೇಶಗಳನ್ನು ಸ್ವಚ್ಛಗೊಳಿಸುವಂತೆ ತಾಕೀತು ಮಾಡಬೇಕು. ಮಾಲಿಕರು ಸ್ವಚ್ಛಗೊಳಿಸದೇ ಇದ್ದರೆ, ನಗರ ಸಭೆಯಿಂದಲೇ ಸ್ವಚ್ಛಗೊಳಿಸಿ ದಂಡ ಸಹಿತವಾಗಿ ಮಾಲಿಕರಿದಂದ ಹಣ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸದೇ ಇದ್ದಲ್ಲಿ, ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುವುದು ಎಂದರು.