ಬೆಂಗಳೂರು ಜು. ೪-ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರಸ್ತುತ ವಾಗಿರಲು ನಿರಂತರ ಜ್ಞಾನಾರ್ಜನೆಯ ಅತ್ಯಗತ್ಯ ಎಂದು ಖ್ಯಾತ ನಟ ರಮೇಶ್ ಅರವಿಂದ್ ಕರೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ನಂತರವೂ ಬೇರೆ ಬೇರೆ ಮಾಧ್ಯಮಗಳ ಮೂಲಕ ಜ್ಞಾನಾರ್ಜನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ನ್ಯಾಷನಲ್ ಕಾಲೇಜಿನ ೬೦ ನೆ ಅಂತರ್ ವರ್ಗೀಯ ಕನ್ನಡ ನಾಟಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಕಾಲೇಜಿನ ಜೀವನವನ್ನು ಮೆಲಕು ಹಾಕಿದರು.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಆಟಾಟೋಪ ಗಳನ್ನು ಪ್ರಸ್ತಾಪಿಸಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಕಾಲೇಜಿನ ಸಹಪಾಠಿಗಳು ನಮ್ಮ ಜೀವನದ ಪ್ರಮುಖ ವ್ಯಕ್ತಿಗಳು. ಕಾಲೇಜಿನ ಸಹಪಾಠಿಯನ್ನೆ ಜೀವನ ಸಂಗಾತಿಯಾಗಿ ಪಡೆದಿದ್ದೇನೆ. ಕಾಲೇಜಿನ ಹಿರಿಯ ವಿದ್ಯಾರ್ಥಿಯ ಜೊತೆಗೂಡಿ ಸೂಪರ್ ಹಿಟ್ ಚಲನಚಿತ್ರ ನಿರ್ಮಿಸಿದ್ದೇನೆ ಎಂದರು.
ತಮಾಷೆ ಮಾಡುತ್ತಾ ಕುಳಿತಿರುವ ವ್ಯಕ್ತಿ ಮುಂದೆ ಅತ್ಯುನ್ನತ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಾಲೇಜಿನ ಜೀವನ ಅತ್ಯಂತ ಸುಂದರ ಜೀವನ, ಅದನ್ನು ಎಂಜಾಯ್ ಮಾಡುತ್ತಲೇ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕು ಎಂದು ಹೇಳಿದರು.
ಕಾಲೇಜಿನ ವೇದಿಕೆಯೇ ಮೊದಲ ನಟನೆಯ ಪಾಠಶಾಲೆ. ಈ ವೇದಿಕೆಯಲ್ಲಿ ಕಲಿತಂತಹ ನಟನೆ ಇಂದು ನನ್ನ ಸಾಧನೆಗೆ ಮೂಲ ಕಾರಣ. ಇಂದು ವಿವಿಧ ನಾಟಕಗಳಲ್ಲಿ ಅಭಿನಯಿಸಿರುವ, ಅದನ್ನ ನಿರ್ಮಿಸಿ ನಿರ್ದೇಶಿಸಿರುವ ಯುವ ಪ್ರತಿಭೆಗಳಿಗೆ ದೊಡ್ಡ ಅವಕಾಶ ದೊರೆಯುವುದು ಖಂಡಿತ ಎಂದರು.
ಎನ್.ಇ.ಎಸ್ ಸಂಸ್ಥೆಗಳ ಅಧ್ಯಕ್ಷ ಡಾ ಎಚ್.ಎನ್. ಸುಬ್ರಮಣ್ಯ, ಗೌರವ ಕಾರ್ಯದರ್ಶಿಗಳಾದ ವಿ.ವೆಂಕಟ ಶಿವಾರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ್, ನ್ಯಾಷನಲ್ ಕಾಲೇಜು ಜಯನಗರದ ಚೇರ್ಮನ್ ವೆಂಕಟ ರಾಮ ರೆಡ್ಡಿ, ಖ್ಯಾತ ರಂಗಕರ್ಮಿ ಗಳಾದ, ಕಲಾ ಗಂಗೋತ್ರಿ ಕಿಟ್ಟಿ, ರಘು ಟಿ, ಛಾಯಾ ಭಾರ್ಗವಿ ಎಸ್.ಹೆಚ್ ಉಪಸ್ಥಿತರಿದ್ದರು.