ನಿಖಿಲ್‌ಗೆ ಮಹಿಳೆಯರಿಂದ ತರಾಟೆ

ಹಾರೋಹಳ್ಳಿ,ಏ.೧೧- ನಮ್ಮ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವವರೆಗೂ ಯಾರು ಗ್ರಾಮಕ್ಕೆ ಬರಬೇಡಿ, ಈ ಬಾರಿ ಚುನಾವಣೆಯಲ್ಲಿ ನಾವು ಯಾರು ಮತದಾನ ಮಾಡುವುದಿಲ್ಲ, ಗ್ರಾಮದಿಂದ ಹೊರಕ್ಕೆ ಹೋಗಿ ಎಂದು ಮಹಿಳೆಯರು ಘೇರಾವ್ ಹಾಕಿದ್ದು ಬಾದಗೆರೆ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹಾರೋಹಳ್ಳಿ ತಾಲ್ಲೂಕಿನ ಬಾದಗೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷದ ಮುಖಂಡರು ಮಹಿಳೆಯರ ವಿರೋಧವನ್ನು ಎದುರಿಸಬೇಕಾಯಿತು.
ಗ್ರಾಮಕ್ಕೆ ಜೆಡಿಎಸ್ ನಾಯಕರು ದಂಡು ಬರುತ್ತಿದ್ದಂತೆ ಮಹಿಳೆಯರು ಕಳೆದ ೫ ವರ್ಷದಲ್ಲಿ ಗ್ರಾಮದಲ್ಲಿ ಯಾವ ಅಭಿವೃದ್ಧಿ ಆಗಿಲ್ಲ, ಕುಡಿಯುವ ನೀರಿಲ್ಲ, ಚರಂಡಿ ಆಗಿಲ್ಲ, ರಸ್ತೆ ಅಭಿವೃದ್ಧಿ ಆಗಿಲ್ಲ, ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ ಎಂದು ಮಹಿಳೆಯರು ನಿಖಿಲ್ ಮುಂದೆ ಅವಲತ್ತುಕೊಂಡರು.
ಮಹಿಳೆಯರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಜೆಡಿಎಸ್ ಮುಖಂಡರು ಮಹಿಳೆಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಮಹಿಳೆಯರು ಸಮಾಧಾನಗೊಳ್ಳದೆ ನಮ್ಮನ್ನು ಯಾರು ಸಮಾಧಾನ ಪಡಿಸಬೇಡಿ, ಯಾವ ಪಕ್ಷದವರು ಗ್ರಾಮಕ್ಕೆ ಬರಬೇಡಿ ಮೊದಲು ಅಭಿವೃದ್ಧಿ ಮಾಡಿ ನಂತರ ಮತ ಕೇಳಲು ಗ್ರಾಮಕ್ಕೆ ಬನ್ನಿ ಎಂದು ಖಂಡತುಂಡವಾಗಿ ಹೇಳಿದರು.
ಇದರಿಂದ ವಿಚಲಿತರಾದ ಮುಖಂಡರು ಏನು ಮಾತನಾಡದೆ ಮೌನಕ್ಕೆ ಶರಣಾದಾಗ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಮುಂದೆ ಈ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ, ನಿಮ್ಮ ಗ್ರಾಮದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಚುನಾವಣೆ ಮುಗಿದ ನಂತರ ಮಾಡುತ್ತೇವೆ ಎಂದು ಭರವಸೆ ನೀಡಿ ಮಹಿಳೆಯರನ್ನು ಸಮಾಧಾನಪಡಿಸಿದರು.