
ಭಾಲ್ಕಿ:ಮಾ.2: ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ, 151 ಸ್ಥಾನಗಳ ಗೆಲುವು ಸಾಧಿಸುವುದರೊಂದಿಗೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚಿಸುವುದೇ ಬಿಜೆಪಿಯ ಗರಿಯಾಗಿದೆ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಬಜೆಟ್ ಜನಪರ ಬಜೆಟ್ ನೀಡಿದ್ದು ನಮ್ಮ ಸರ್ಕಾರ ಇದನ್ನು ಅನುಷ್ಠಾನ ಗೊಳಿಸಲು ರಾಜ್ಯದ 6 ಕೋಟಿ ಜನ ನಮಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಸಿದ್ದರಾಜು ಮಾತನಾಡಿ, ರಥಯಾತ್ರೆ ಮಾಡುವುದು ಬಿಜೆಪಿಯ ಪರಿವಾರದ ಕೊಡುಗೆಯಾಗಿದೆ. ನಮ್ಮ ನಾಯಕ ಅಡ್ವಾಣಿಯವರಿಂದ ಹಿಡಿದು ಇಲ್ಲಿಯ ವರೆಗೆ ಸಾಕಷ್ಟು ರಥಯಾತ್ರೆಗಳನ್ನು ಮಾಡುತ್ತ ಜನರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಅದರಲ್ಲಿ ರಾಜ್ಯದಲ್ಲಿ ನಡೆಯುವ ಸಂಕಲ್ಪಯಾತ್ರೆ ಒಂದಾಗಿದೆ. ಮಾ. 3 ರಂದು ಭಾಲ್ಕಿಯ ಗಾಂಧಿ ವೃತ್ತದಲ್ಲಿ ರಥಯಾತ್ರೆಯ ಸಾರ್ವಜನಿಕ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆ ಇದೆ. ರಥಯಾತ್ರೆಯಲ್ಲಿ ಡಬಲ್ ಇಂಜಿನ ಸರ್ಕಾರದ ಸಾಧನೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯವಾಗುತ್ತದೆ ಎಂದು ವಿವರಣೆ ನೀಡಿದರು.
ವಿಧಾನಪರಿಷತ್ ಮಾಜಿ ಉಪಸಭಾಪತಿ ರಘುನಾಥರಾವ ಮಲ್ಕಾಪೂರೆ ಮಾತನಾಡಿ, ಮಾ.3 ರಂದು ಬಸವಕಲ್ಯಾಣಕ್ಕೆ ಆಗಮಿಸುವ ವಿಜಯ ಸಂಕಲ್ಪ ರಥಯಾತ್ರೆಯು ಅಂದು ಮದ್ಯಾನ್ಹ ಹುಮನಾಬಾದ ಕ್ಷೇತ್ರದಲ್ಲಿ ರೋಡ್ ಶೋ ಮಾಡಿ, ಸಾಯಂಕಾಲ ಭಾಲ್ಕಿಯ ಮಹಾತ್ಮಾಗಾಂಧಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ರಥಯಾತ್ರೆಯಲ್ಲಿ ಪ್ರಮುಖರಾದ ಜಗದೀಶ ಶೆಟ್ಟರ, ಶ್ರೀರಾಮುಲು, ಭಗವಂತ ಖೂಬಾ, ಪ್ರಭುಚವ್ಹಾಣ ಸೇರಿದಂತೆ ಮುಂತಾದ ಗಣ್ಯರು ಹಾಜರಿರುವರು ಎಂದು ಹೇಳಿದರು. ಭಾಲ್ಕಿಯ ಬಿಜೆಪಿ ಪ್ರಮುಖ ಡಿ.ಕೆ.ಸಿದ್ರಾಮ ಮಾತನಾಡಿ, ಭಾಲ್ಕಿಗೆ ಆಗಮಿಸುವ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಹೆಚ್ಚಿನ ಜನ ಸೇರಿ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ತಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಡಾ| ದಿನಕರ ಮೋರೆ, ಮಾಜಿ ಎಮ್.ಎಲ್.ಸಿ ಅಮರನಾಥ ಪಾಟೀಲ, ಸುರೇಶ ಹುಬಳಿಕರ, ಪಂಡಿತ ಶಿರೋಳೆ, ಸುಧಾಕರ ಸೂರ್ಯವಂಶಿ, ವೀರಣ್ಣಾ ಕಾರಬಾರಿ ಉಪಸ್ಥಿತರಿದ್ದರು.