
ಕಲಬುರಗಿ,ಮೇ 19: ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಇಂಚಗೇರಿ ಮಠದಲ್ಲಿ ನಡೆಯುವ ಆಧ್ಯಾತ್ಮ ಸಪ್ತಾಹದಲ್ಲಿ ಭಾಗವಹಿಸಲು ಕಲಬುರಗಿಯ ಮಾಧವಾನಂದ ನಗರದಲ್ಲಿರುವ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಆಶ್ರಮದಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆಯು ನಾಳೆ ( ಮೇ.20 ) ಹೊರಡುವದು. ದಿಂಡಿ ಪಲ್ಲಕ್ಕಿ ಪಾದಯಾತ್ರೆಯು ರವಿವಾರ ಇಂಚಗೇರಿ ಮಠಕ್ಕೆ ತಲುಪಿ ಆಧ್ಯಾತ್ಮ ಸಪ್ತಾಹದಲ್ಲಿ ಭಾಗವಹಿಸಿ ಮೇ. 31 ರಂದು ಇಂಚಗೇರಿ ಮಠದಿಂದ ಮರಳಿ ಹೊರಟು ಜೂನ್ 5 ರಂದು ಕಲಬುರಗಿಗೆ ತಲುಪುವದು. ಈ ಪಾದಯಾತ್ರೆಯಲ್ಲಿ ಇಂಚಗೇರಿ ಸಾಂಪ್ರದಾಯದ ನಿಯಮದಂತೆ ನಿತ್ಯನೇಮ ಉಪಾಸನೆ,ಭಜನೆ,ಪುರಾಣ ಪ್ರವಚನ ಹೀಗೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ಜರಗುವವು.
ಇಂಚಗೇರಿ ಮಠದಲ್ಲಿ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ 43 ನೇ ಪುಣ್ಯ ಸ್ಮರಣೋತ್ಸವದ ಆಧ್ಯಾತ್ಮ ಸಪ್ತಾಹವು ಮೇ.29 ರಂದು ಶ್ರೀಮಠದ ಸದ್ಗುರುಗಳಾದ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರಿಂದ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭವಾಗಿ ಮೇ. 31 ರಂದು ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನದೊಂದಿಗೆ ಮಂಗಲಗೊಳ್ಳುವದು ಎಂದು ಭಾರತೇಶ ಹಾಸಿಲಕರ ತಿಳಿಸಿದ್ದಾರೆ.