ನಾಳೆ ಆದಿಜಾಂಬವ ಜನಜಾಗೃತಿ ಸಮಾವೇಶ

ತಿಪಟೂರು, ಮಾ. ೩೧- ಆದಿ ಜಾಂಬವ ಸಮಾಜದ ವತಿಯಿಂದ ಜನಜಾಗೃತಿ ಸಮಾವೇಶವನ್ನು ನಗರದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಕಲಾಭವನದಲ್ಲಿ ಏ. ೧ ರಂದು ಏರ್ಪಡಿಸಲಾಗಿದೆ ಎಂದು ಆದಿ ಜಾಂಬವ ಸಮಾಜದ ಮುಖಂಡ ಶಾಂತಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ೩೦ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜದ ಬಂಧುಗಳಿದ್ದು, ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿ.ಪಂ. ಮತ್ತು ಗ್ರಾ.ಪಂ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ನಮ್ಮ ಸಮಾಜದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಮತ್ತು ಸಮಾಜದ ಜಾಗೃತಿಗಾಗಿ ೧೦೦ಕ್ಕೂ ಅಧಿಕ ಜನರಿಂದ ತಮಟೆ ಜಾಗೃತಿ, ೨೦೦ ಬೈಕ್‌ಗಳ ರ್‍ಯಾಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಈ ಜನಜಾಗೃತಿ ಸಮಾವೇಶಕ್ಕೆ ನಮ್ಮ ತಾಲ್ಲೂಕಿನ ಪಕ್ಕದ ತುರುವೇಕೆರೆ, ಚಿ.ನಾ.ಹಳ್ಳಿ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಯ್ಯ. ಕುಪ್ಪಾಳು ರಂಗಸ್ವಾಮಿ, ಕೆ ಶಾಂತಪ್ಪ, ಕಾಂತರಾಜು, ಸೋಮಶೇಖರ್, ಲಿಂಗರಾಜು, ಕುಮಾರ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.