ನಾಳೆಯಿಂದ, ಹೊಸಪೇಟೆಗೆ ಮುಂಬೈ-ಸೊಲ್ಲಾಪುರ-ರೈಲುಗಳು


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಆ28: ಬಹುಜನರ, ಬಹುದಿನಗಳ ಬೇಡಿಕೆಯಾಗಿದ್ದ ಮುಂಬೈ-ಗದಗ (ಸಿ.ಎಸ್.ಟಿ ಛತ್ರಪತಿ ಶಿವಾಜಿ ಟರ್ಮಿನಸ್) ಮತ್ತು ಸೊಲ್ಲಾಪುರ-ಗದಗ ಈ ಎರಡು ರೈಲುಗಳನ್ನು ಹೊಸಪೇಟೆವರೆಗೆ ವಿಸ್ತರಿಸಲು ಅನುಮತಿ ಕೊಟ್ಟಿದ್ದು ನಾಳೆಯಿಂದ ಈ ರೈಲುಗಳು ಸಂಚಾರ ಆರಂಭವಾಗಲಿದ್ದು ರೈಲ್ವೆ ಹೋರಾಟ ಕ್ರೀಯಾಸಮಿತಿ ಸೇರಿದಂತೆ ಈ ಭಾಗದ ಪ್ರಯಾಣಿಕರ ಹರ್ಷಕ್ಕೆ ಕಾರಣವಾಗಿದೆ.
ಬಳ್ಳಾರಿ ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪ ಹಾಗೂ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣನವರು ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ನೂತನ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಮುಂಬೈ ದೇಶದ ವಾಣಿಜ್ಯ ಹಾಗೂ ಆರ್ಥಿಕ ರಾಜಧಾನಿಯಾಗಿದ್ದು, ಮಹಾನಗರದ ಛತ್ರಪತಿ ಶಿವಾಜಿ ರೈಲ್ವೇ ಟರ್ಮಿನಸ್ ನಿಲ್ದಾಣವು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿದ್ದು ಈ ಮಾರ್ಗದ ಮತ್ತೊಂದು ತುದಿಯಲ್ಲಿರುವ ಹೊಸಪೇಟೆಯು ವಿಶ್ವಪಾರಂಪರಿಕ ತಾಣ ಹಂಪಿಗೆ ಹೊಂದಿಕೊಂಡಿರುವುದರಿಂದ ಎರಡು ವಿಶ್ವ ಪಾರಂಪರಿಕ ಕೇಂದ್ರಗಳ ನಡುವೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಯುರೋಪಿಯನ್ ವಾಸ್ತು ಶೈಲಿಯಲ್ಲಿ ನಿರ್ಮಿಸಿರುವ ಛತ್ರಪತಿ ಶಿವಾಜಿ ನಿಲ್ದಾಣವು ವಿಶ್ವದ ಅತ್ಯಂತ ಆಕರ್ಷಕ ಹಾಗೂ ಸುಂದರ ನಿಲ್ದಾಣವೆಂದು ಹೆಸರಾಗಿದ್ದು, ದೇಶದ ಅತ್ಯಂತ ಹೆಚ್ಚು ಜನನಿಬಿಡ ನಿಲ್ದಾಣಗಳಲ್ಲಿ ಒಂದಾಗಿದೆ. ಅಲ್ಲದೆ ದೇಶದ ಪ್ರಪ್ರಥಮ ಪ್ಯಾಸೆಂಜರ್ ರೈಲು 1853 ಏಪ್ರೀಲ್ 16 ರಂದು ಛತ್ರಪತಿ ಶಿವಾಜಿ ನಿಲ್ದಾಣ ಹಾಗೂ ಠಾಣೆಗಳ ನಡುವೆ ಸಂಚಾರ ಆರಂಭವಾಯಿತು.
ಇಂಥ ಭವ್ಯ ಹಿನ್ನೆಲೆ ಇರುವ ರೈಲ್ವೇ ನಿಲ್ದಾಣದದೊಂದಿಗೆ ಹೊಸಪೇಟೆಯು ನೇರ ಸಂಪರ್ಕ ಪಡೆಯುವುದರಿಂದ ಈ ಭಾಗದ ಪ್ರವಾಸೋದ್ಯಮಕ್ಕೆ ದೊಡ್ಡ ಚೈತನ್ಯ ದೊರೆತಂತಾಗಿ, ಆರ್ಥಿಕ ಚಟುವಟಿಕೆಗಳು ವೃದ್ದಿಯಾಗುತ್ತವೆ. 
  ರೈಲು ಸಂಚಾರದ ಸಮಯ
ಮುಂಬೈ (ಸಿ.ಎಸ್.ಎಂ.ಟಿ) ಗಾಡಿ ಸಂಖ್ಯೆ: 11139 ಪ್ರತಿ ದಿನ ರಾತ್ರಿ 9.20 ಮುಂಬೈನಿಂದ ನಿರ್ಗಮಿಸಿ ಪುಣೆ, ಸೊಲ್ಲಾಪುರ, ವಿಜಯಪುರ ಗದಗ, ಕೊಪ್ಪಳ ಮಾರ್ಗವಾಗಿ ಸಂಚರಿಸಿ ಮಾರನೇ ದಿನ 12.45ಕ್ಕೆ ಹೊಸಪೇಟೆಗೆ ಆಗಮಿಸಿ ಅಂದೇ ಮಧ್ಯಾಹ್ನ 2 ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸಿ ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 5.10 ನಿಮಿಷಕ್ಕೆ ಮುಂಬೈ ತಲುಪುವುದು.
ಸೊಲ್ಲಾಪುರ- ಹೊಸಪೇಟೆ ಗಾಡಿ ಸಂಖ್ಯೆ : 11305/306 ಪ್ರತಿದಿನ ಮುಂಜಾನೆ 11.50 ನಿಮಿಷಕ್ಕೆ ಅಲ್ಲಿಂದ ನಿರ್ಗಮಿಸಿ ವಿಜಯಪುರ ಗದಗ ಮಾರ್ಗವಾಗಿ ರಾತ್ರಿ 10 ಗಂಟೆಗೆ ಆಗಮಿಸಿ ಅಂದೇ ರಾತ್ರಿ 12.15 ನಿಮಿಷಕ್ಕೆ ಹೊಸಪೇಟೆಯಿಂದ ಅದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 9.30 ಸೊಲ್ಲಾಪುರ ತಲುಪುವುದು.
ಕರ್ನಾಟಕ ಮಹಾರಾಷ್ಟ್ರಗಳ ನಡುವೆ ವಾಣಿಜ್ಯ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಎರಡು ರೈಲುಗಳ ಆರಂಭಕ್ಕೆ ಶ್ರಮಿಸಿದ ಎಲ್ಲಾ ಗಣ್ಯ ಮಾನ್ಯರಿಗೂ ಹಾಗೂ ರೈರುತ್ಯ ರೈಲ್ವೇ ವಲಯ ಅಧಿಕಾರಿಗಳಿಗೆ  ಹಾಗೂ ಈ ಭಾಗದ ರೈಲ್ವ ಬಳಕೆದಾರರ ಸಮಿತಿಯ ಸದಸ್ಯರಾಗಿ ಶ್ರಮಿಸಿದ ಸದಸ್ಯರುಗಳಿಗೆ ಒತ್ತಡ ನೀಡಿದ ಈ ಭಾಗದ ಸಂಸದರಿಗೂ ರೈಲ್ವೆ ಹೋರಾಟ ಕ್ರಿಯಾ ಸಮಿತಿಯು ಕಾರ್ಯದರ್ಶಿ ಕೆ.ಮಹೇಶ್, ಅಧ್ಯಕ್ಷ ಯಮುನೇಶ ಹಾಗೂ ಸದಸ್ಯರು ಅಭಿನಂದಿಸಿದ್ಧಾರೆ.