ಬೆಂಗಳೂರು,ಜು.೩೦-ಜುಲೈ ಮಧ್ಯದಲ್ಲಿ ತೀವ್ರಗೊಂಡ ಮಳೆ ಕಳೆದ ಎರಡು ಅಥವಾ ಮೂರು ದಿನಗಳಿಂದ ಶಾಂತವಾಗಿತ್ತು. ಶಾಂತವಾಗಿರುವ ವರುಣದೇವ ನಾಳೆಯಿಂದ ಮತ್ತೆ ಅಬ್ಬರಿಸಲಿದ್ದಾನೆ.
ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಲಘು ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲೂ ಇದೇ ವಾತಾವರಣ ಮುಂದುವರಿಯಲಿದೆ.
ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಜೀವ ಕಳೆಯಿಂದ ತುಂಬಿವೆ.ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಜುಲೈ ೩೧ ರಿಂದ ಆಗಸ್ಟ್ ೩ ರವರೆಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ೬ ರಿಂದ ೧೧ ಸೆಂ.ಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಆಗಸ್ಟ್ ೩ ರಂದು ಹಳದಿ ಅಲರ್ಟ್ ಘೋಷಿಸಲಾಗಿದೆ.