ನಾಲ್ವರ ಬಂಧನ 96 ಕೆಜಿ ಗಾಂಜಾ ಜಪ್ತಿ

ಬೆಂಗಳೂರು,ಜು.೪-ನೆರೆಯ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ಕೈಗೊಂಡು ನಾಲ್ವರು ಅಂತರ್ ರಾಜ್ಯ ಡ್ರಗ್ ಪೆಡ್ಲರ್ಸ್ ನ್ನು ಬಂಧಿಸಿರುವ ಗಿರಿನಗರ ಪೊಲೀಸರು ೫೦ ಲಕ್ಷ ಮೌಲ್ಯದ ೯೬ ಕೆಜಿ ಗಾಂಜಾ ಜಪ್ತಿಮಾಡಿದ್ದಾರೆ.
ಸೈಯ್ಯದ್ ಸಾಧಿಕ್ ಹಾಗೂ ಮಹಾರಾಷ್ಟ್ರ ಮೂಲದ ಸಹೋದರರಾದ ಅಮೂಲ್, ಆಕಾಶ್, ರಾಹುಲ್ ಬಂಧಿತ ಆರೋಪಿಗಳಾಗಿದ್ದಾರೆ.
ಮಹಾರಾಷ್ಟ್ರದ ಜಾಲ್ನಾದಲ್ಲಿ ಗ್ಯಾರೇಜ್ ಹೊಂದಿರುವ ಆರೋಪಿಗಳು ಸೈಯದ್ ಸಾಧಿಕ್ ಜೊತೆಗೂಡಿ ಗಾಂಜಾ ಮಾರಾಟ ದಂಧೆ ಮಾಡುತ್ತಿದ್ದರು. ಒಡಿಶಾದಿಂದ ಗಾಂಜಾವನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಬಂಧನದ ವೇಳೆ ಹೈಡ್ರಾಮಾ :
ಸಾಯಿರಾಮ್‌ನನ್ನು ಬಂಧಿಸಿದ್ದ ಗಿರಿನಗರ ಠಾಣಾ ಪೊಲೀಸರು ಬಳಿಕ ಸೈಯ್ಯದ್ ಸಾಧಿಕ್ ನನ್ನು ಬಂಧಿಸಿದ್ದರು.ಸಾಧಿಕ್ ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಜಾಲ್ನಾಕ್ಕೆ ತೆರಳಿದ್ದರು. ಬಳಿಕ ಆರೋಪಿ ಸಹೋದರರನ್ನು ಬಂಧಿಸಿ ಕರೆ ತರುವಾಗ ಅವರ ಕುಟುಂಬಸ್ಥರು ಹೈಡ್ರಾಮಾ ನಡೆಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ್ದವರು ಕರ್ನಾಟಕ ಪೊಲೀಸರು ಎಂದು ತಿಳಿದಿದ್ದರೂ ಸಹ ತಮ್ಮವರನ್ನು ಯಾರೋ ಅಪಹರಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು.
ದೂರು ಬಂದ ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಅಲ್ಲಿನ ಪೊಲೀಸರು ಕರ್ನಾಟಕ ಪೊಲೀಸರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಅಡ್ಡಗಟ್ಟಿದ್ದಾರೆ. ನಂತರ ನಾವು
ಕರ್ನಾಟಕ ಪೊಲೀಸರು ಎಂದು ಐಡಿ ಕಾರ್ಡ್ ತೋರಿಸಿ, ತಾವು ಆರೋಪಿಗಳನ್ನು ಬಂಧನ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಿಕ ಈ ಪ್ರಕರಣ ಇತ್ಯರ್ಥವಾಗಿದ್ದು, ಆರೋಪಿಗಳೊಂದಿಗೆ ಪೊಲೀಸರು ನಗರಕ್ಕೆ ಮರಳಿ ವಿಚಾರಣೆ ಕೈಗೊಂಡಿದ್ದಾರೆ.
ಮಹಿಳೆಯರ ಬಂಧನ:
ಮನೆ ಮಾಲೀಕರ ಕುಮ್ಮಕ್ಕಿನಿಂದ ಉತ್ತರ ಭಾರತದಿಂದ ಬೆಂಗಳೂರಿಗೆ ಆಕ್ರಮವಾಗಿ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಮನೆಯೊಡತಿ ಸೇರಿ ಮೂವರು ಮಹಿಳೆಯರನ್ನು ಜೂನ್? ೫ ರಂದು ಪುಲಕೇಶಿನಗರ ಪೊಲೀಸರು ಬಂಧಿಸಿದ್ದರು. ಜಾರ್ಖಂಡ್ ಮೂಲದ ಪ್ರೇಮಾ, ಸುನಿತಾ ಹಾಗೂ ಮನೆಯೊಡತಿ ಮುತ್ಯಾಲಮ್ಮ ಬಂಧಿತ ಆರೋಪಿಗಳಾಗಿದ್ದು ಅವರನ್ನು ಜೈಲಿಗೆ ಕಳುಹಿಸಲಾಗಿದೆ.