
ಬೆಂಗಳೂರು,ಮೇ.೧೦-ಜಗದ್ವಿಖ್ಯಾತ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿರವರ ಪತ್ನಿ ಸುಧಾಮೂರ್ತಿರವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಿ ಕಪಿಲ್ ಶರ್ಮಾ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಸುಧಾಮೂರ್ತಿಯವರ ಜೊತೆ ನಟಿ ರವಿನಾ ಟಂಡನ್ ಮತ್ತು ನಿರ್ಮಾಪಕ ಗುಣಿತ್ ಮೋಂಗಾ ಕೂಡ ಅತಿಥಿಯಾಗಿ ಭಾಗವಹಿಸಿದ್ದರು.
ಸದ್ಯ ಶೋಗೆ ಸಂಬಂಧಿಸಿದ ಪ್ರೋಮೋವನ್ನು ನಿರ್ವಾಹಕರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸುಧಾಮೂರ್ತಿ ಅವರು ತಮ್ಮ ಪತಿ ನಾರಾಯಣ ಮೂರ್ತಿ ಅವರನ್ನು ಮೊದಲ ಸಲ ಭೇಟಿಯಾದ ಬಗೆಯನ್ನು ಹೇಳಿಕೊಂಡಿದ್ದಾರೆ.
ತನಗೆ ಪ್ರಸನ್ನ ಎಂಬ ಗೆಳೆಯನಿದ್ದು, ತನಗಾಗಿ ಆತ ಪ್ರತಿದಿನ ನಾರಾಯಣ ಮೂರ್ತಿ ಎಂಬ ಪುಸ್ತಕ ತರುತ್ತಿದ್ದ. ಯಾವುದೇ ಪುಸ್ತಕ ತಂದುಕೊಟ್ಟರೂ ಅದಕ್ಕೆ ನಾರಾಯಣ ಮೂರ್ತಿ ಎಂಬ ಹೆಸರು ಅಂಟಿಕೊಂಡಿರುತ್ತಿತ್ತು. ಹಾಗಾಗಿ ನಾನು ಆ ಪುಸ್ತಕದಲ್ಲಿದ್ದ ನಾರಾಯಣಮೂರ್ತಿ ಹೆಸರನ್ನು ಯಾರೋ ಅಂತರಾಷ್ಟ್ರೀಯ ಬಸ್ ಕಂಡೆಕ್ಟರ್ ಹೆಸರಿರಬೇಕು ಎಂದು ಭಾವಿಸಿದ್ದೇ ಎಂದಿದ್ದಾರೆ. ಸುಧಾ ಮೂರ್ತಿರವರು ಹೀಗೆ ಹೇಳುತ್ತಿದ್ದಂತೆ ಶೋನಲ್ಲಿ ಭಾಗವಹಿಸಿದ್ದವರೆಲ್ಲಾ ನಗೆಗಡಲಲ್ಲಿ ತೇಲಿದ್ದಾರೆ.
ಇಷ್ಟೇ ಅಲ್ಲದೆ ಅದೇ ಸ್ನೇಹಿತ ಪ್ರಸನ್ನ ನಾರಾಯಣಮೂರ್ತಿ ಅವರನ್ನು ನಿಜವಾಗಿಯೂ ತಮ್ಮ ಮನೆಗೆ ಕರೆತಂದ ಘಟನೆಯನ್ನು ಸುಧಾಮೂರ್ತಿ ಹೇಳಿಕೊಂಡಿದ್ದಾರೆ. ನಾರಾಯಣ ಮೂರ್ತಿ ಅವರನ್ನು ಭೇಟಿಯಾಗುವ ಮುನ್ನ ಅವರು ಸಿನಿಮಾ ಹೀರೋನಂತೆ ಸುಂದರವಾಗಿ ಇರುತ್ತಾರೆ ಎಂದು ಭಾವಿಸಿದ್ದೆ. ಆದರೆ ಬಾಗಿಲು ತೆರೆದು ಕಂಡಾಗ ಯಾರಪ್ಪಾ ಈ ಬಾಲಕ ಒಳ್ಳೇ ಬಸ್ ಕಂಡಕ್ಟರ್ ಥರಾ ಇದಾನಲ್ಲಾ ಎಂದು ಭಾವಿಸಿದೆ ಎಂದಿದ್ದಾರೆ. ಇದಕ್ಕೆ ಸೆಟ್ನಲ್ಲಿ ಇದ್ದವರೆಲ್ಲಾ ನಕ್ಕಿದ್ದಾರೆ. ಸದ್ಯ ಈ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.