
ಯಾದಗಿರಿ:ಎ.10: ಜಿಲ್ಲೆಯ ವಡಗೇರಿ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿನ ಉರ್ದು ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಗೆ ಸ್ಪಂದಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.
ಶಾಲೆಯಲ್ಲಿ 180ಕ್ಕೂ ಹೆಚ್ಚು ಮಕ್ಕಳಿದ್ದು, ಸಮಸ್ಯೆಯಲ್ಲಿಯೇ ಓದುತ್ತಿದ್ದಾರೆ. ಶಾಲಾ ಕಟ್ಟಡವೂ ಶಿಥಿಲಗೊಂಡು ದಿನನಿತ್ಯ ಛತ್ತು ಉದುರುತ್ತಿದೆ. ಮಳೆ ಬಂದರೆ ಸೋರುತ್ತದೆ. ಅಲ್ಲದೇ ಕಾಲಂಗಳು ಶಿಥಿಲಗೊಂಡು ತುಕ್ಕು ಹಿಡಿದ ರಾಡುಗಳು ತೇಲಿ ನಿಂತಿವೆ. ಅದು ಸಹ ಬೀಳುತ್ತದೆ ಎಂಬ ಭಯದ ವಾತಾವರಣದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಗೋಳು ಹೇಳತೀರದು ಎಂದು ಆರೋಪಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದಾರೆ.
ಅಧಿಕಾರಿಗಳಾದ ವಡಗೇರಿ ತಾಪಂ ಇಓ ಮತ್ತು ಬಿಇಒ ಪಿಡಿಓ ಅವರು ಸ್ಥಳಕ್ಕೆ ಭೇಟಿ ನೀಡಿ ಶಾಲೆ ಆವರಣ ಸ್ವಚ್ಛಗೊಳಿಸಿ ಕುಡಿವ ನೀರಿನ ವ್ಯವಸ್ಥೆ, ಹಂದಿಗಳು ಕಂಪೌಂಡನಲ್ಲಿ ಬಾರದಂತೆ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಶೌಚಾಲಯಕ್ಕೆ ನೀರಿನ ವ್ಯವಸ್ಥೆ, ಕೊಳವೆ ಬಾವಿಗೆ ಒಂದು ಎಚ್ಪಿ ಹೊಸ ಮೋಟಾರ್ ಅಳವಡಿಸಿದ್ದಾರೆ.
ಇದಲ್ಲದೇ ಪಿಆರ್ಇ ಮತ್ತು ಜಿಪಂ ನಿಂದ ಹಳೆ ಕಟ್ಟಡ ಡೆಮಾಲಿಷನ್ ಗೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ರಜೆ ಇರುವುದರಿಂದ ಛತ್ತುಗಳ ರಿಪೇರಿ ಮಾಡಬೇಕು, ಹೊಸ ಕಟ್ಟಡಕ್ಕೆ ಅನುದಾನ ಶೀಘ್ರ ಬಿಡುಗಡೆ ಮಾಡಬೇಕು, ಶಿಕ್ಷಕರ ಕೊರತೆ ಇದ್ದು ಎಲ್ಲ 180 ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದು, ಸ್ಪಂದಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಅವರು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮರೆಮ್ಮ ಗಂ. ಬಸವರಾಜ ಹೆಚ್ಚಿನ ಮುತುವರ್ಜಿ ವಹಿಸಿ ಅನುಕೂಲ ಮಾಡಿಕೊಡಲು ಸಹಕರಿಸಿದ್ದಕ್ಕೆ ಅಭಿನಂದನಾರ್ಹರು ಎಂದು ಅವರು ಹೇಳಿದರು.
ಉರ್ದು ಶಾಲೆ ಹಾಗೂ ಆಸ್ಪತ್ರೆ ಮುಂಭಾಗದಲ್ಲಿ ಹೊಸ ಬಜೆಟ್ ನಲ್ಲಿ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಶರಣಪ್ಪ ಹದನೂರ, ಆಬ್ಬಾಸಲಿ ಮುಲ್ಲಾ, ಖಾಜಾ ಮೈನುದ್ದಿನ್ ಜಮ್ ಸೇರಿ,, ಇಸ್ಮಾಯಿಲ್ ಸಾಬ್ ಕುರುಕುಂದ, ಅಲಿಸಾಬ್ ಮುಜಾವರ್, ಜಾವಿದ್ ಹೊಸಳ್ಳಿ,, ಶಬ್ಬೀರ್ ಗಡ್ಡೆ, ಮೌಲಾಲಿ ನಯಾಗರ್, ಜಾವದ್ ಕುರುಕುಂದ,, ಭೀಮರಾಯ ತುಮಕೂರ್, ದೇವು, ಶಿವಕುಮಾರ್, ಬಾಬಾ ದರ್ಜಿ, ಮಹಮ್ಮದ್ ಸಾಬ್ ಬಾವಿಕಟ್ಟಿ, ಶಬ್ಬೀರ್, ಮಹಮ್ಮದ್, ಮಶಾಕ್, ಬಾಸುಮಿಯಾ , ಮೆಹಬೂಬ್, ಇಜಾಜ್, ಮಹಿಬೂಬ್ ಬೆಂಡೆಗುಂಬಳಿ ಊರಿನ ಮುಖಂಡರು ಉಪಸ್ಥಿತರಿದ್ದರು.