
ದೇವದುರ್ಗ,ಮೇ.೦೬- ಕನ್ನಡ ಸಾಹಿತ್ಯ ಪರಿಷತ್ ನಾಡಿನ ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ ಉಳಿಸಿ ಬೆಳೆಸುವ ಜತೆಗೆ ಸಾಂಸ್ಕೃತಿಕ ಶ್ರೀಮಂತಿಕೆಗೆ ಎತ್ತಿಹಿಡಿದಿದೆ. ಇದರ ಜತೆಗೆ ನಾಡಿನ ಅಭಿವೃದ್ಧಿಗೆ ತನ್ನದೆಯಾದ ಸೇವೆ ಮಾಡಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಶಾಂತಿನಗರದಲ್ಲಿ ಕಸಾಪ ಹಾಗೂ ಹಗಲುವೇಷ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ನ ೧೦೯ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅಧ್ಯಕ್ಷತೆವಹಿಸಿ ಶುಕ್ರವಾರ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪನೆಯಾದ ಸಾಹಿತ್ಯ ಪರಿಷತ್ ಇಂದು ೧೦೯ನೇ ಸಂಸ್ಥಾಪನೆ ದಿನ ಆಚರಿಸಿಕೊಳ್ಳುತ್ತಿದೆ. ಒಂದು ಶತಮಾನಗಳ ಕಾಲ ನಾಡಿನ ಹಿರಿಮೆ ಗರಿಮೆಗೆ ಶ್ರಮಿಸುತ್ತಿದೆ. ಪ್ರತಿವರ್ಷ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಕ್ಕೊಂದು ನಿದರ್ಶನವಾಗಿದೆ ಎಂದರು.
ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೈನುದ್ದೀನ್ ಕಾಟಮಳ್ಳಿ ಮಾತನಾಡಿ, ಕಸಾಪ ಕನ್ನಡ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಜಾನಪದ ಕೆಲ ಉಳಿಸುವ ಜತೆಗೆ ಬೆಳೆಸಿಕೊಂಡು ಹೋಗುತ್ತಿದೆ. ಯುವ ಮನಸ್ಸುಗಳಿಗೆ ಇನ್ನು ಹೆಚ್ಚಿನ ಆದ್ಯತೆ ಸಿಗಬೇಕಿದೆ. ಪರಿಷತ್ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಉಪನ್ಯಾಸಕ ಶಿವರಾಜ್ ರುದ್ರಾಕ್ಷಿ ಮಾತನಾಡಿದರು. ಅಜೀವ ಸದಸ್ಯ ಚಿದಾನಂದಪ್ಪ ಶಿವಂಗಿ, ಹನುಮಂತಪ್ಪ ಮನ್ನಾಪುರ, ಮಾಕಂಡಯ್ಯ ನಾಡದಾಳ್, ಎಚ್.ಡಿ.ಶಿವರಾಜ್, ಹಗಲುವೇಷ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಈರಣ್ಣ ರುದ್ರಾಕ್ಷಿ, ಜಂಬಣ್ಣ ಗೋಪಾಲ್ ರುದ್ರಾಕ್ಷಿ, ಹೂನಯ್ಯ, ಪ್ರಕಾಶ್ ರೆಡ್ಡಿಗೌಡ, ರವಿಕುಮಾರ್ ಬಲ್ಲಿದವ್, ಅಬ್ದುಲ್ ಇತರರಿದ್ದರು.