
ದಾವಣಗೆರೆ.ಮೇ.೪ : ಮನೆ ಬಾಗಿಲಿಗೆ ಬಂದು ಸೇವೆ ಸೌಲಭ್ಯ ನೀಡುವಂತಹ ಅಭ್ಯರ್ಥಿ ಪರ ನಿಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಅವರು, ಇಂದು ಬೆಳಗ್ಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರ 35ನೇ ವಾರ್ಡ್ ನಿಟ್ಟುವಳ್ಳಿ ಲೆನಿನ್ ನಗರದಲ್ಲಿನ ಮತ ಪ್ರಚಾರಕ್ಕೆ ಶ್ರೀ ದುರ್ಗಾಂಬಿಕ ದೇವಿ ದೇವಸ್ಥಾನದಿಂದ ಚಾಲನೆ ನೀಡಿ ಮತಯಾಚಿಸಿದರು.ಈ ವೇಳೆ ಸಾರ್ವಜನಿಕವಾಗಿ ಮತದಾರರ ಉದ್ದೇಶಿಸಿ ಮಾತನಾಡಿದ ಸಿದ್ದೇಶ್ವರ ಅವರು, ಮನೆ ಬಳಿ ಕಾಯಿಸುವ ಬದಲಿಗೆ ಮನೆ ಬಾಗಿಲಿಗೆ ಬಂದು ಜನ ಸೇವೆ ನೀಡುವ ಜವಾಬ್ದಾರಿಯುತ ನಾಯಕರಿಗೆ ಅಮೂಲ್ಯವಾದ ಮತ ಚಲಾಯಿಸಬೇಕು. ಹೀಗೆ ಮನೆ ಬಾಗಿಲಿಗೆ ನಿಮ್ಮ ಸೇವೆ ನೀಡುವ ಮಹದಾಸೆ ಹೊತ್ತು ಬಿಜೆಪಿ ಪಕ್ಷದ ದಕ್ಷಿಣದಲ್ಲಿ ಬಿ.ಜಿ. ಅಜಯ್ ಕುಮಾರ್ ಮತ್ತು ಉತ್ತರದಲ್ಲಿ ನಾಗರಾಜ್ ಲೋಕಿಕೆರೆ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ ಎಂದು ಹೇಳಿದರು.ನಮ್ಮ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳು ಅನೇಕ ಜನಪರ ಯೋಜನೆಗಳ ಜಾರಿಗೆ ತಂದಿದ್ದು, ನಮ್ಮ ಸರ್ಕಾರಗಳ ಸಾಧನೆಗಳ ಗುರುತಿಸಿ ಕಮಲದ ಗುರುತಿಗೆ ಮತ ನೀಡಿ ನಮ್ಮ ಪಕ್ಷದ ಅಭ್ಯರ್ಥಿಗಳ ಬೆಂಬಲಿಸಿ ನಿಮ್ಮ ಸೇವೆ ನೀಡುವ ಅವಕಾಶ ನೀಡಬೇಕೆಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮುಖಂಡರುಗಳಾದ ಹೇಮಂತ ಕುಮಾರ್, ಶಿವರಾಜ್ ಪಾಟೀಲ್, ಹೆಚ್.ಎನ್. ಶಿವಕುಮಾರ್, ಜಿಲ್ಲಾ ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ಸಂಗನಗೌಡ್ರು ಸೇರಿದಂತೆ ಇತರರು ಸಾಥ್ ನೀಡಿದ್ದರು.