
ಸಂಜೆವಾಣಿ ವಾರ್ತೆ
ದಾವಣಗೆರೆ. ಅ.೨೫; ನವರಾತ್ರಿ ಹಬ್ಬವು ಸ್ತ್ರೀ ಶಕ್ತಿಯ ಸಂಕೇತವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯು ನವ ರೂಪದಲ್ಲಿ ವಿವಿಧ ಶಕ್ತಿ ಸ್ವರೂಪಳಾಗಿ ಗೋಚರಿಸುತ್ತಾಳೆ. ಅದೇ ರೀತಿ ಇಂದು ಸ್ತ್ರೀ ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ತೋರಿ ಜಗದ ಗಮನ ಸೆಳೆಯುತ್ತಿದ್ದಾಳೆ ಎಂದು ಪೀಕಾಕ್ ಅಂಡ್ ಕೋ ದ ಛೇರ್ಮನ್ ಎನ್.ಆರ್. ನಾಗಭೂಷಣ್ ಹೇಳಿದರು. ಅವರಿಂದು ದಾವಣಗೆರೆಯ ನೃತ್ಯ ವಿದ್ಯಾನಿಲಯದ ವತಿಯಿಂದ ನವರಾತ್ರಿಯ ಹಬ್ಬದ ಅಂಗವಾಗಿ ಸರಸ್ವತಿ ನಗರ “ಎ” ಬ್ಲಾಕ್ನ ಕಲಾಶೈಲದಲ್ಲಿ ಆಯೋಜಿಸಲಾಗಿದ್ದ ನವರಾತ್ರಿಯ ಪ್ರಾಮುಖ್ಯತೆ ಸಾರುವ ವಿದ್ವತ್ ಸಭೆ ಮತ್ತು ನವರಾತ್ರಿ ಉತ್ಸವವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೃತ್ಯ ವಿದ್ಯಾ ನಿಲಯದ ಮುಖ್ಯ ಶಿಕ್ಷಕಿ ವಿದುಷಿ ರಕ್ಷಾ ರಾಜಶೇಖರ ಅವರು ಮಾತನಾಡಿ ವಿದ್ಯೆಯಿಂದ ಸಂಸ್ಕಾರ, ವಿನಯ, ನಡತೆ, ಸಂಪತ್ತು ಹಾಗೂ ನೆಮ್ಮದಿ ದೊರೆಯುತ್ತದೆ ಎಂದರು. ಚಿರಂತನ ಅಕಾಡೆಮಿಯ ಕಾರ್ಯದರ್ಶಿ ಮಾಧವ ಪದಕಿ ಮಾತನಾಡಿ ನವರಾತ್ರಿ ಉತ್ಸವವು “ದೇವರ ಒಲುಮೆಯನ್ನು ಪಡೆಯುವ ಸಂದರ್ಭ” ಎಂದು ಬಣ್ಣಿಸಿದರು.ನಾದ ನೃತ್ಯಾಲಯದ ವಿಧುಷಿ ಅನನ್ಯ ಸಂಪತಕುಮಾರ್ ಮಾತನಾಡಿ ಮಹಿಳೆ ಸಾಂಸ್ಕೃತಿಕ ಶ್ರೀಮಂತಿಕೆ ಪಡೆಯಲು ಜ್ಞಾನದೊಂದಿಗೆ ಅದಕ್ಕೆ ಸರಿಯಾಗಿ ಕುಟುಂಬದ ಪ್ರೋತ್ಸಾಹವೂ ಸದಾ ಅವಶ್ಯವಾಗಿ ಬೇಕಾಗುತ್ತದೆ ಎಂದರು.ಅನುಶ್ರೀ ಸಂಗೀತ ಶಾಲೆಯ ಗುರು ವೀಣಾ ಹೆಗಡೆ ಸಂಗೀತ ಸುಧೆಯ ಮೂಲಕ ಸಭೆಯ ರಂಗನ್ನು ಹೆಚ್ಚಿಸಿದರು. ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಸೆಮಿ ಕ್ಲಾಸಿಕಲ್ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಿತು.ನೃತ್ಯ ವಿದ್ಯಾನಿಲಯ ದಾವಣಗೆರೆ ಮುಖ್ಯಸ್ಥ ರಾಜಶೇಖರ್ ಸಕ್ಕಟ್ಟು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು, ಪಾಲಕರು ಮತ್ತು ಸರಸ್ವತಿ ನಗರದ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.