ನರಸೀಪುರದಲ್ಲಿ ಗಾಳಿ, ಗುಡುಗು ಸಹಿತ ಭಾರೀ ಮಳೆ

ತಿ.ನರಸೀಪುರ: ಮೇ.12:- ತಾಲೂಕಿನ ಬಹುಭಾಗದಲ್ಲಿ ಗಾಳಿ, ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.ಭಾರೀ ಗಾಳಿ ಬೀಸಿದ ಪರಿಣಾಮ ಹಲವೆಡೆ ಭಾರೀ ಗಾತ್ರದ ಮರಗಳು ನೆಲಕ್ಕುರುಳಿದ ಘಟನೆಗಳು ನಡೆದಿದ್ದು,ಹಲವೆಡೆ ಬೆಳೆಗಳ ನಷ್ಟ ಸಂಭವಿಸಿದೆ
ಇಂದು ಸಂಜೆ ಐದು ಘಂಟೆಯಿಂದ ಆರಂಭಗೊಂಡ ಭಾರೀ ಗಾಳಿ ಸಹಿತ ಮಳೆಯು ಒಂದು ತಾಸಿಗೂ ಹೆಚ್ಚು ಕಾಲ ಸುರಿಯಿತು.ಹೆಚ್ಚು ಗಾಳಿ ಬೀಸಿದ ಪರಿಣಾಮ ತಾಲೂಕಿನ ಹಲವು ಕಡೆ ಮರಗಳು,ವಿದ್ಯುತ್ ಕಂಬಗಳು ಮತ್ತು ಬಾಳೆಗಿಡಗಳು ನೆಲ್ಲಕ್ಕುರುಳಿವೆ.
ತಲಕಾಡು ಅತಿಥಿ ಗೃಹದ ಪಕ್ಕದಲ್ಲಿದ್ದ ಭಾರೀ ಗಾತ್ರದ ಮರ ನೆಲ್ಲಕ್ಕುರುಳಿದೆ.ಅಲ್ಲದೆ ಸಿ.ಬಿ.ಹುಂಡಿ ಬಳಿ ಮರವೊಂದು ಮುಖ್ಯ ರಸ್ತೆಗೆ ಬಿದ್ದ ಪರಿಣಾಮ ಕೆಲ ಸಮಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.ಮಳೆ,ಗಾಳಿ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ವ್ಯತ್ಯಯವಾಯಿತು.
ನೆಲಕಚ್ಚಿದ ಬಾಳೆ ಬೆಳೆ:
ಮಳೆಗೂ ಮುನ್ನ ಅತೀ ವೇಗದಲ್ಲಿ ಗಾಳಿ ಬೀಸುತ್ತಿದ್ದರ ಪರಿಣಾಮ ಸುಜ್ಜಲೂರು ಗ್ರಾಮದ ಆಸುಪಾಸಿನ 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 25000ಸಾವಿರಕ್ಕೂ ಹೆಚ್ಚಿನ ಬಾಳೆಗಿಡಗಳು ನೆಲಕಚ್ಚಿವೆ.ಇನ್ನೆರಡು ತಿಂಗಳಲ್ಲಿ ಕಟಾವಿಗೆ ಬರಬೇಕಿದ್ದ ಬಾಳೆ ಗಿಡಗಳು ಮುರಿದು ಬಿದ್ದಿವೆ.ಇದರಿಂದ ರೈತರಿಗೆ ಸರಿಸುಮಾರು 1.5 ಕೋಟಿ ರೂಗಳ ನಷ್ಟ ಆಗಿರಬಹುದು ಸ್ಥಳೀಯರು ತಿಳಿಸಿದ್ದಾರೆ.