
ಅಥಣಿ : ಮಾ.19:ನಾನು ಕಳೆದ 20 ವರ್ಷಗಳಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇದಲ್ಲದೆ ಭಾರತೀಯ ಜನತಾ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದೇನೆ. ವಿಧಾನ ಪರಿಷತ್ ಸದಸ್ಯನಾಗಿ ನನ್ನ ಪಾಡಿಗೆ ನಾನು ಜನಪರ ಕಾರ್ಯಗಳನ್ನು ಮಾಡುತ್ತಾ ಇದ್ದೇನೆ. ಆದರೆ ಕ್ಷೇತ್ರದ ಮತದಾರರು ಮತ್ತು ಹಲವು ಸಮುದಾಯದ ಮುಖಂಡರು ನಾನು ಚುನಾವಣೆಗೆ ನಿಲ್ಲಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಈ ಬಗ್ಗೆ ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಪಕ್ಷದ ವರಿಷ್ಠರಿಗೆ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿಲ್ಲ. ಮುಂಬರುವ ವಿಧಾನಸಭಾ ಚುನಾವಣೆ ವಿಚಾರವಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ.ಅದ್ದರಿಂದ ನಾನು ಮಾರ್ಚ್ 27 ರಂದು ಎಲ್ಲ ಸಮುದಾಯದವರ ಒಪ್ಪಿಗೆ ಪಡೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ನೀವು ಯಾವತ್ತೂ ನನ್ನ ಬೆಂಬಲವಾಗಿ ನಿಲ್ಲಬೇಕು ಎಂದು ಮುಸ್ಲಿಂ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮನವಿ ಮಾಡಿದರು.
ಅವರು ಅಥಣಿ ಪಟ್ಟಣದ ನೂರಾನಿ ಹಾಲ್ ನಲ್ಲಿ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ಮಾತನಾಡುತ್ತಾ ನನ್ನ ಪಾಡಿಗೆ ನಾನು ಸುಮ್ಮನಿದ್ದರೂ, ಕೆಲವರು ನನ್ನನ್ನು ಸುಮ್ಮನೆ ಬಿಡುತ್ತಿಲ್ಲ, ಹಾಗಾಗಿ ಇಂದು ನಾನು ನಿಮ್ಮ ಮುಂದೆ ಬಂದಿದ್ದೇನೆ, ನಿಮ್ಮ ಅಭಿಪ್ರಾಯ ನನಗೆ ಮುಖ್ಯವಾಗಿದೆ. ನಾನು ಭಾರತೀಯ ಜನತಾ ಪಕ್ಷದಲ್ಲಿ ಕಳೆದ 20 ವರ್ಷಗಳಿಂದ ಶಾಸಕನಾಗಿ ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಜಾತಿಭೇದ ಮಾಡದೆ ಎಲ್ಲ ಸಮುದಾಯಗಳ ವಿಶ್ವಾಸ ಪಡೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಬರುವ ಮಾರ್ಚ 27 ರ ಒಳಗಾಗಿ ತಾಲೂಕಿನ ಎಲ್ಲ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಅಥಣಿಯಿಂದ ಚುಣಾವಣೆ ಸ್ಪರ್ಧೆ ಮಾಡು ಎಂದರೆ ನಾನು ಪಕ್ಷದಲ್ಲಿ ಟಿಕೆಟ್ ಕೇಳುತ್ತೇನೆ. ಟಿಕೆಟ್ ನೀಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧರಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಾನು ಮನೆಯಲ್ಲಿ ಸುಮನೆ ಕುಳಿತಿದ್ದೆ. ಆದರೆ, ಕೆಲವರು ನನ್ನನ್ನು ಕೂರಲು ಬಿಡುತ್ತಿಲ್ಲ. ಹಾಗಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ ನಿಮ್ಮ ಅಭಿಪ್ರಾಯ ನನಗೆ ಮುಖ್ಯ. ನನಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ ಟಿಕೆಟ್ ನೀಡುವ ವಿಚಾರದ ಬಗ್ಗೆ ಪಕ್ಷ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಅದನ್ನು ತೀರ್ಮಾನ ಮಾಡುವುದು ನಾನೂ ಅಲ್ಲ , ಅವರೂ ಅಲ್ಲ. ಆದರೆ ನಾನು ವಿಧಾನಪರಿಷತ್ ಸದಸ್ಯನಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕೋ ? ಮಾಡಬೇಡವೋ ? ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಅವರೆಲ್ಲರ ಅಭಿಪ್ರಾಯದ ಮೇಲೆ ಟಿಕೆಟ್ ಕೇಳುವ ಬಗ್ಗೆ ಚಿಂತಿಸುತ್ತೇನೆ. ಇಂದು ಮುಸ್ಲಿಂ ಸಮುದಾಯದ ಅಭಿಪ್ರಾಯ ಕೇಳಿದ್ದೇನೆ, ಶೀಘ್ರದಲ್ಲಿ ತಳವಾರ, ಕೋಳಿ ಸಮಾಜ, ಹಾಲುಮತ ಕುರುಬರ ಸಮಾಜ, ಹಡಪದ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳ ಅಭಿಪ್ರಾಯ ಸಂಗ್ರಹಿಸಿ ಮಾರ್ಚ್ 27 ರಂದು ಎಲ್ಲ ಸಮುದಾಯಗಳ ಜತೆಗೆ ಸಭೆ ಮಾಡಿ ನಿರ್ಣಯ ಮಾಡುತ್ತೇನೆ. ಇಲ್ಲಿ ನಾನು ಪಕ್ಷದ ವರಿಷ್ಠರಲ್ಲಿ ಟಿಕೆಟ್ ಕೇಳಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ. ಎಲ್ಲ ಸಮುದಾಯದವರು ಟಿಕೆಟ್ ಕೇಳು ಎಂದು ಅಭಿಪ್ರಾಯ ಸೂಚಿಸಿದರೆ , ಕೇಳುತ್ತೇನೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಇನ್ನೂಸ ಮುಲ್ಲಾ, ಅತೀಕ್ ಮೋಮಿನ್, ತೋಫಿಕ ಪಾರ್ಥನಳ್ಳಿ, ಅಬ್ದುಲಅಜೀಜ ಮುಲ್ಲಾ, ಮುಸ್ತಾಕ್ ಮುಲ್ಲಾ, ವಲಿಖಾನ ಪಠಾಣ, ಆಶೀಫ್ ತಾಂಬೋಳಿ, ರಶೀದ ಬಾರಗೀರ, ಫರೀದ್ ಅವಟಿ, ರಫೀಕ್ ಡಾಂಗೆ, ಸೋಹೆಲ್ ಕಾಜಿ, ಅಜರ ಮುಲ್ಲಾ, ಫೈಸಲ್ ಮೋಮಿನ್, ಯುವ ನಾಯಕ ಚಿದಾನಂದ ಸವದಿ, ಶಿವಕುಮಾರ ಸವದಿ, ಸಂತೋಷ ಸಾವಡಕರ, ಕಲ್ಲೇಶ್ ಮಡ್ಡಿ, ಮುದುಕಣ್ಣ ಶೇಗುಣಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜನ ಸಾಗರ ಕಂಡು ಭಾವುಕರಾದ ಸವದಿ: ಲಕ್ಷ್ಮಣ ಸವದಿ ವೇದಿಕೆಗೆ ಆಗಮಿಸುತ್ತಿದ್ದಂತೆ, ಜಯ ಘೋಷಣೆಗಳನ್ನು ಕೂಗುತ್ತಾ ಹೂಗಳ ಸುರಿಮಳೆ ಸುರಿಸಿ ಸಂಭ್ರಮದಿಂದ ಬರಮಾಡಿಕೊಂಡರು. ಮುಸ್ಲಿಂ ಸಮುದಾಯದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ ಸವದಿ ಅವರು ಐದು ಸಾವಿರಕ್ಕೂ ಅಧಿಕ ಜನ ಸೇರಿರುವುದನ್ನು ಕಂಡು ಲಕ್ಷ್ಮಣ ಸವದಿ ಒಂದು ಕ್ಷಣ ಭಾವುಕರಾದರು.
ಅಥಣಿ ಮತ ಕ್ಷೇತ್ರದ ಮತದಾರರ ಭಾಂದವರ ಹಾಗೂ ವಿವಿಧ ಸಮುದಾಯಗಳ ಮುಖಂಡರ ಅಭಿಪ್ರಾಯ ಕೇಳಿ ಚುನಾವಣೆಗೆ ಹೋಗುವುದು ಸೂಕ್ತ ಎಂದೆನಿಸಿದೆ, ತಾಲೂಕಿನ ಮುಸ್ಲಿಂ ಸಮುದಾಯ ನನ್ನ ಹೃದಯದಲ್ಲಿ ಅಚ್ಚೊತ್ತಿದೆ ಮಾರ್ಚ್ 27 ರ ಒಳಗಾಗಿ ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರಿಗೆ ಟಿಕೆಟ್ ಕೇಳುತ್ತೇನೆ. ಪಕ್ಷದ ವರಿಷ್ಠರು ನಾನು ಟಿಕೆಟ್ ಕೇಳಿದರೆ ನೂರಕ್ಕೆ ನೂರರಷ್ಟು ಪಕ್ಷ ನನ್ನ ಕೈ ಬಿಡುವುದಿಲ್ಲ ಟಿಕೆಟ್ ನಿರಾಕರಿಸುವುದಿಲ್ಲ ನನಗೆ ಟಿಕೆಟ್ ಕೊಡುತ್ತಾರೆ ಎಂಬ ಆತ್ಮವಿಶ್ವಾಸವಿದೆ.
- ಲಕ್ಷ್ಮಣ ಸವದಿ,
ಮಾಜಿ ಡಿಸಿಎಂ ಹಾಗೂ ವಿಪ ಸದಸ್ಯ