
ಬಳ್ಳಾರಿ, ಏ.01: ಚುನಾವಣೆ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರದಲ್ಲಿ ಧ್ವನಿ ವರ್ಧಕಗಳು, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದು ಮತ್ತು ಸಂಗೀತ ವಾದ್ಯಗಳನ್ನು ಧ್ವನಿ ವರ್ಧಕಗಳ ಮೂಲಕ ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ಲೌಡ್ ಸ್ಪೀಕರ್ಗಳು, ಧ್ವನಿ ವರ್ಧಕಗಳನ್ನು ಬಳಸಲು 15 ದಿನಗಳೊಳಗಾಗಿ ಆಯಾ ವ್ಯಾಪ್ತಿಯ ನಿಗದಿಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಯಾವುದೇ ಪರವಾನಗಿ ಇಲ್ಲದೆ ಧ್ವನಿವರ್ಧಕಗಳನ್ನು ಬಳಸಿದಲ್ಲಿ ಅಂತಹ ವಾಹನ ಮತ್ತು ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಪರವಾನಿಗೆ ಇಲ್ಲದೇ ಆಳವಡಿಸಲಾಗಿರುವ ಧ್ವನಿವರ್ಧಕಗಳನ್ನು ಸ್ವಯಂಪ್ರೇರಣೆಯಿಂದ ಹಿಂಪಡೆಯಬೇಕು.
ಯಾವುದೇ ಧ್ವನಿ ವರ್ಧಕ ಬಳಸುವ ವಾಹನ ಮತ್ತು ಯಾವುದೇ ಪ್ರದೇಶದಲ್ಲಿ ಸಿಡಿಸುವ ಉದ್ದೇಶವಿದ್ದಲ್ಲಿ ಅನುಮತಿ ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಸ್ಥಳೀಯ, ಆಯಾ ವ್ಯಾಪ್ತಿ ಪೊಲೀಸ್ ಠಾಣೆ ಮತ್ತು ಚುನಾವಣಾಧಿಕಾರಿಗಳಿಗೆ ಪರವಾನಿಗೆಯನ್ನು ಪ್ರದರ್ಶಿಸಬೇಕಾಗುತ್ತದೆ.
ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ವಾಹನಗಳು, ಸರಕು ವಾಹನಗಳು, ಆಟೋಗಳು ಧ್ವನಿವರ್ಧಕಗಳನ್ನು ಬಳಸುವಾಗ ಇದನ್ನು ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ.
ಪರವಾನಿಗೆ ಪಡೆಯುವ ವೇಳೆ ಸಂಬಂಧಿಸಿದವರ ಗುರುತಿನ ಪತ್ರ ಮತ್ತು ವಾಹನಗಳ ದಾಖಲೆಗಳ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಎಲ್ಲಾ ವಿಧವಾದ ಧ್ವನಿ ವರ್ಧಕಗಳ ಬಳಕೆಯು ಮತದಾನ ಮುಕ್ತಾಯಕ್ಕೆ 48 ಗಂಟೆಗಳ ಮೊದಲು ಕೊನೆಗೊಳ್ಳಲಿದೆ.
ಈ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಆದೇಶವು ಇಡೀ ಬಳ್ಳಾರಿ ಜಿಲ್ಲೆಯಾದ್ಯಂತ ಅನ್ವಯಿಸಲಿದೆ ಎಂದು ಅವರು ತಿಳಿಸಿದ್ದಾರೆ.