
ದಾವಣಗೆರೆ– ಜು.23; ನೀತಿ ನಿಯಮಗಳು ಜೀವನದ ಉನ್ನತಿಗೆ ಮೂಲ. ಹಗಲು ಸೂರ್ಯ ರಾತ್ರಿ ಚಂದ್ರ ಬೆಳಕು ಕೊಡಬಲ್ಲ. ಆದರೆ ಸರ್ವ ಕಾಲಕ್ಕೂ ಸರ್ವರಿಗೂ ಬೆಳಕು ನೀಡುವ ಧರ್ಮವೊಂದೇ ಆಶಾಕಿರಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ತಾಲೂಕಿನ ನಾಗರಸನಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.ಮಾನವನ ಬದುಕು ಬಹಳಷ್ಟು ಒತ್ತಡಗಳಿಂದ ಕೂಡಿದೆ. ಜರ್ಜರಿತ ಮನಕ್ಕೆ ಶಾಂತಿ ನೆಮ್ಮದಿ ಮರೀಚಿಕೆಯಾಗಿದೆ. ಧರ್ಮ ಕೊಡುವ ಫಲಗಳನ್ನು ಬಯಸುವ ಮನುಷ್ಯ ಆ ಧರ್ಮದ ಪರಿಪಾಲನೆ ಮಾಡುತ್ತಿಲ್ಲ. ಹೀಗಾಗಿ ಮನುಷ್ಯನ ಜೀವನ ಅಸಮಾಧಾನ ಅತೃಪ್ತಿಯಿಂದ ಕೂಡಿದೆ. ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಫಲ ಪ್ರಾಪ್ತವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಇಷ್ಟಲಿಂಗದಲ್ಲಿರುವ ಅದ್ಭುತ ಶಕ್ತಿಯನ್ನು ಪ್ರತಿಪಾದಿಸಿದ್ದಾರೆ. ಬೇಡಿದವರಿಗೆ ಬೇಡಿದ ಇಷ್ಟಾ ರ್ಥಗಳನ್ನು ಕೊಡುವ ಶಕ್ತಿಯಿದೆ. ಶ್ರೀ ಗುರುವಿನಿಂದ ಶಿವದೀಕ್ಷಾ ಸಂಪನ್ನನಾಗಿ ಮೋಕ್ಷದಾಯಕವಾದ ಶಿವ ಪಂಚಾಕ್ಷರಿ ಮಂತ್ರ ಜಪಿಸಿ ಜೀವನ್ಮುಕ್ತನಾಗುವುದನ್ನು ರೇಣುಕ ಗೀತೆಯಲ್ಲಿ ನಿರೂಪಿಸಿದ್ದಾರೆ. ನಾಗರಸನಹಳ್ಳಿ ಗ್ರಾಮದ ಭಕ್ತ ಸಂಕುಲ ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಿದ ಕಾರ್ಯ ಕಂಡು ಹರುಷ ಉಂಟಾಗಿದೆ ಎಂದರು.ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮತ್ತು ರಾಮಘಟ್ಟದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಬಿ.ಜೆ.ಪಿ. ಯುವ ಧುರೀಣ ಅಜಿತ ಕುಮಾರ್, ತೇಜಸ್ವಿ ಪಟೇಲ್, ಎಸ್.ಬಿ.ಅಜಯನ್, ಬಿ.ಜಿ.ಅಜಯಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಶ್ಯಾಗಲೆ ಕೆ.ಎಂ.ಮAಜುನಾಥ ನಿರೂಪಿಸಿದರು. ಡಿ.ಆರ್.ಧನಂಜಯ ಸ್ವಾಗತಿಸಿದರು. ಎಂ.ವಿ.ರುದ್ರೇಶ ವಂದನಾರ್ಪಣೆ ಸಲ್ಲಿಸಿದರು.