
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.14 :- ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶನಿವಾರ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕೂಡ್ಲಿಗಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಗೆಲುವು ಎಂದದ್ದೇ ತಡ ಅಲ್ಲಿಯೇ ನಿಂತಿದ್ದ ನರಸಿಂಹಗಿರಿ ದೊಡ್ಮನೆಯ ಅತೀ ದೊಡ್ಡ ಅಭಿಮಾನಿ ಮಾರಪ್ಪ ಕಾಂಗ್ರೆಸ್ ಅಭ್ಯರ್ಥಿ ನರಸಿಂಹಗಿರಿ ದೊಡ್ಮನೆ ಮಗ ಡಾ ಶ್ರೀನಿವಾಸ ಅವರನ್ನು ಬಿಗಿದಪ್ಪಿಕೊಂಡು ಸಂತಸದ ಕಂಬನಿ ಮಿಡಿದರು.
ಮೂಲ ನರಸಿಂಹಗಿರಿ ಗ್ರಾಮದ ಬಿಇಡಿ ಪದವೀಧರ ಮಾರೆಪ್ಪ ಅವರ ಕುಟುಂಬವು ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರನ್ನು ಅಪ್ಪಾಜಿ ಎಂದು ಸಂಭೋದಿಸುವಷ್ಟು ದೊಡ್ಮನೆ ಅಭಿಮಾನಿಗಳು ಕಳೆದ ನವೆಂಬರ್ ತಿಂಗಳಿಂದಲೂ ಕೂಡ್ಲಿಗಿ ವಿಧಾನಸಭಾ ಚುನಾವಣೆಗೆ ದೊಡ್ಮನೆ ಮಗ ಡಾ ಶ್ರೀನಿವಾಸ ಸ್ಪರ್ದಿಸುವ ಪೂರ್ವಸಿದ್ಧತೆಯಿಂದಲೂ ಅವರ ಜೊತೆಗಿದ್ದು ಹಗಲಿರುಳು ಅವರ ಜೊತೆಯಲ್ಲಿದ್ದು ಕ್ಷೇತ್ರದ ಪ್ರತಿ ಹಳ್ಳಿಗಳನ್ನು ಭೇಟಿ ಮಾಡಿ ಅಲ್ಲಿನ ಜನತೆಯ ಸಂಪರ್ಕ, ಆ ಗ್ರಾಮದ ಮೂಲ ಸಮಸ್ಯೆ ಅಲ್ಲಿನ ಮುಖಂಡರ ಭೇಟಿ ಮಾಡುತ್ತಿದ್ದರು ಅಲ್ಲದೆ ಚುನಾವಣೆ ಮುಗಿಯುವವರೆಗೂ ಸಕ್ರಿಯ ಕಾರ್ಯಕರ್ತನಂತೆ ಕೆಲಸ ಮಾಡಿದ ನರಸಿಂಹಗಿರಿ ಮಾರಪ್ಪ ಶನಿವಾರ ಹೊಸಪೇಟೆಯಲ್ಲಿ ನಡೆದ ಚುನಾವಣಾ ಫಲಿತಾಂಶದಲ್ಲಿ ಕೂಡ್ಲಿಗಿ ಕ್ಷೇತ್ರದ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ ಶ್ರೀನಿವಾಸ ಗೆಲುವು ಎನ್ನುತ್ತಿದ್ದಾಗ ಸಂತಸದ ಕಣ್ಣೀರಿನಲ್ಲಿ ಅಲ್ಲಿಯೇ ನಿಂತಿದ್ದ ಡಾ ಶ್ರೀನಿವಾಸ ಅವರನ್ನು ಬಿಗಿದಪ್ಪಿದ ಸಂತಸದ ಕ್ಷಣ ಅಲ್ಲಿರುವ ಉಳಿದ ಅಭಿಮಾನಿಗಳ ಕೇಕೆ ಸಿಳ್ಳೆ ಮುಗಿಲು ಮುಟ್ಟಿತ್ತು. ಬಿಗಿದಪ್ಪಿದ ದೊಡ್ಮನೆ ಅಭಿಮಾನಿಗೆ ತಾನು ಸಹ ಬಿಗಿದಪ್ಪಿಕೊಂಡ ಕೂಡ್ಲಿಗಿ ಕ್ಷೇತ್ರದ ನೂತನ ಶಾಸಕ ಡಾ ಶ್ರೀನಿವಾಸ ಸಂತಸದ ಕ್ಷಣವನ್ನು ಹಂಚಿಕೊಂಡರು.