ದೇಶದ ಸ್ವಾತಂತ್ರ್ಯಕ್ಕೆ ಮಂಗಲಪಾಂಡೆ ಕೊಡುಗೆ ಅನನ್ಯ

ಕಲಬುರಗಿ,ಜು.19: ವ್ಯಾಪರಕ್ಕಾಗಿ ಭಾರತಕ್ಕೆ ಆಗಮಿಸಿದ ಬ್ರೀಟಿಷರು ಒಡೆದಾಳುವ ನೀತಿಯ ಮೂಲಕ ಸುಮಾರು 250 ವರ್ಷಗಳ ಕಾಲ ಆಡಳಿತ ಮಾಡಿ ದೇಶವನ್ನು ದಾಸ್ಯಕ್ಕೀಡು ಮಾಡಿದರು. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸೈನಿಕರಾಗಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಥಮ ಬಾರಿಗೆ ಧ್ವನಿ ಎತ್ತುವ ಮೂಲಕ ಹೋರಾಟ ಮಾಡಿ ಹುತಾತ್ಮರಾದ ಮಂಗಲಪಾಂಡೆ ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಅಪ್ರತಿಮ ದೇಶಭಕ್ತರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಮಂಗಲಪಾಂಡೆ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡಿ, ಮಂಗಲಪಾಂಡೆ ಅವರು ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಅವರಲ್ಲಿರುವ ಅಪ್ಪಟ ದೇಶಭಕ್ತಿ ಇಂದಿನ ಎಲ್ಲಾ ಯುವಕರಿಗೆ ಮಾದರಿಯಾಗಿದೆ. ಅವರ ಕೊಡುಗೆಯ ಬಗ್ಗೆ ತಿಳಿದುಕೊಂಡು ದೇಶಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಇಂಗ್ಲೀಷ್ ಅಕಾಡೆಮಿಯ ನಿರ್ದೇಶಕ ದತ್ತು ಹಡಪದ, ಕಂಪ್ಯೂಟರ ತರಬೇತಿ ಕೇಂದ್ರದ ನಿರ್ದೇಶಕ ಇಸ್ಮೈಲ್ ಅತ್ತರ್, ಪ್ರಮುಖರಾದ ಪೃಥ್ವಿ ಕೋರವಾರ, ಸಾಯಿಪ್ರಸಾದ ಎಸ್.ಸಣಮನಿ ಸೇರಿದಂತೆ ಮತ್ತಿತರರಿದ್ದರು.